ವಾಮಂಜೂರು ಟೈಗರ್ಸ್-ಜೈ ಶಂಕರ್ ಮಿತ್ರ-ಮಾತೃ ಮಂಡಳಿ ಸಹಯೋಗದಲ್ಲಿಕೆತ್ತಿಕಲ್ನಲ್ಲಿ ಡಾ. ಭರತ್ ಶೆಟ್ಟಿ ಗೋ ಪೂಜೆ
ಗುರುಪುರ : ವಾಮಂಜೂರಿನ ವಾಮಂಜೂರು ಟೈಗರ್ಸ್(ರಿ), ತಿರುವೈಲಿನ ಜೈ ಶಂಕರ್ ಮಿತ್ರ ಮಂಡಳಿ(ರಿ) ಮತ್ತು ಜೈಶಂಕರ್ ಮಾತೃ ಮಂಡಳಿ ವತಿಯಿಂದ ಕೆತ್ತಿಕಲ್ ವೈಶಾಖ್ ಗಾರ್ಡನ್ನಲ್ಲಿ ಅ. ೨೨ರಂದು ೩ನೇ ವರ್ಷದ ಸಾರ್ವಜನಿಕ ಗೋ ಪೂಜೆ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ದೀಪ ಬೆಳಗಿಸಿ ಗೋ ಪೂಜೆಗೆ ಚಾಲನೆ ನೀಡಿದರೆ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಗೋವುಗಳಿಗೆ ಆರತಿ ಬೆಳಗಿ ಆಹಾರ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಗೋಪೂಜೆ ಮಹತ್ವದ ಬಗ್ಗೆ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಮಾತನಾಡಿ, ದೀಪಾವಳಿ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಹಿಂದೂ ಸಮಾಜದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ದೇಶೀ ಗೋವುಗಳ ತಳಿ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಗೋವಿನ ಗೊಬ್ಬರ, ಮೂತ್ರದಿಂದ ತಯಾರಿಸುವ ಸೊತ್ತುಗಳಿಗೆ ಒಂದಷ್ಟು ಬೆಲೆ ಹೆಚ್ಚಾಗಿದ್ದರೂ ಅವುಗಳನ್ನು ಖರೀದಿಸಿ ಪರೋಕ್ಷವಾಗಿ ಗೋ ಶಾಲೆಗಳ ಅಭಿವೃದ್ಧಿಗೆ ಬಯಸಬೇಕು ಎಂದರು.
ಬಿಜೆಪಿ ಮುಖಂಡ ಜಗದೀಶ ಶೇಣವ ವಾಮಂಜೂರು ಮಾತನಾಡಿ, ಧರ್ಮ ಶಿಕ್ಷಣದ ಬಳಿಕ ಹಿಂದೂಗಳಲ್ಲಿ ಎಲ್ಲ ವಿಚಾರದಲ್ಲೂ ಜಾಗೃತಿ ಮೂಡಲಾರಂಭಿಸಿದೆ. ಕಾರಣ, ಗೋ ಪೂಜೆಯಾದ ಇಂದು ಇಲ್ಲಿ ಇಷ್ಟೊಂದು ಮಂದಿ ಸೇರಿದ್ದೀರಿ. ಹಸುವಿನ ಪ್ರತಿಯೊಂದು ಸೊತ್ತು ಮನುಷ್ಯ ಜೀವನಕ್ಕೆ ಅಗತ್ಯ. ಅವು ರೋಗ ನಿರೋಧಕ, ಆಯುಷ್ಯ ವೃದ್ಧಕ ಎಂದು ಹೇಳಿದರು.
ಸಭೆಯಲ್ಲಿ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಬಜಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ವಿಹಿಂಪ ಜಿಲ್ಲಾ ಗೋರಕ್ಷ ಪ್ರಮುಖ್ ಹರೀಶ್ ಎಡಪದವು, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಮಾಜಿ ತಾಪಂ ಅಧ್ಯಕ್ಷ ಗೋಕುಲದಾಸ್ ಶೆಟ್ಟಿ ಪಡುಪಳ್ಳಿ, ವಾಮಂಜೂರು ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ಮಾಜಿ ಮೇಯರ್ ಮನೋಜ್ ಕುಮಾರ್, ಜೈಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಬಾಲಕೃಷ್ಣ, ಜೈ ಶಂಕರ್ ಮಾತೃ ಮಂಡಳಿ ಅಧ್ಯಕ್ಷೆ ಸೌಮ್ಯಾ ಡಿ. ಬಂಗೇರ, ವಾಮಂಜೂರು ಟೈಗರ್ಸ್ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.
ಸ್ವಾಗತಿಸಿದ ಅಶ್ವಿನ್ ಶೆಟ್ಟಿ ಬೊಂಡAತಿಲಗುತ್ತು ವಂದಿಸಿದರು. ಉದ್ಯಮಿ ರಘು ಸಾಲ್ಯಾನ್ ಹಾಗೂ ವಾಮಂಜೂರು ಟೈಗರ್ಸ್ ಹಾಗೂ ಜೈ ಶಂಕರ್ ಮಿತ್ರ-ಮಾತೃ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಗೋ ಪೂಜೆಯಲ್ಲಿ ಸ್ಥಳೀಯ ನೂರಾರು ಮಂದಿ ಪಾಲ್ಗೊಂಡಿದ್ದರು.



