ಸಿದ್ಧಕಟ್ಟೆ ಕೊಡಂಗೆ: ಅ.12ರಂದು ಎರಡನೇ ವರ್ಷದ ‘ರೋಟರಿ ಕಂಬಳ 150ಕ್ಕೂ ಮಿಕ್ಕಿ ಜೋಡಿ ಸಬ್ ಜ್ಯೂನಿಯರ್ ಕೋಣಗಳು ಭಾಗವಹಿಸುವ ನಿರೀಕ್ಷೆ
ಬಂಟ್ವಾಳ:ಕಳೆದ ವರ್ಷ ರೋಟರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ‘ರೋಟರಿ ಕಂಬಳ’ ಕೂಟ ನಡೆಸಿ ಗಮನ ಸೆಳೆದಿದ್ದ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಈ ಬಾರಿ ಇತರ ನಾಲ್ಕು ರೋಟರಿ ಕ್ಲಬ್ ಗಳ ಸಹಭಾಗಿತ್ವದಲ್ಲಿ ಸಿದ್ಧಕಟ್ಟೆ ಕೊಡಂಗೆ ವೀರ -ವಿಕ್ರಮ ಜೋಡುಕರೆಯಲ್ಲಿ ಅ.12ರಂದು ಎರಡನೇ ವರ್ಷದ ‘ರೋಟರಿ ಕಂಬಳ’ ನಡೆಸಲು ಮುಂದಾಗಿದೆ ಎಂದು ಈ ಕಂಬಳ ಕೂಟದ ನೇತೃತ್ವ ವಹಿಸಿಕೊಂಡಿರುವ ಮೊಡಂಕಾಪು ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಎಲ್ಯಾಸ್ ಸ್ಯಾಂಕ್ಟಿಸ್ ಹೇಳಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಾರಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಜೊತೆಗೆ ಬಂಟ್ವಾಳ , ಮೊಡಂಕಾಪು, ಸಿದ್ದಕಟ್ಟೆ ಫಲ್ಗುಣಿ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಸಹಭಾಗಿತ್ವವನ್ನು ನೀಡಿದೆ ಎಂದರು. ‘ಅಂದು ಬೆಳಿಗ್ಗೆ ಗಂಟೆ 8.30ಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಅಧ್ಯಕ್ಷತೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಕಂಬಳ ಕರೆ ಉದ್ಘಾಟಿಸುವರು. ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಕಂಬಳ ಕೂಟಕ್ಕೆ ಚಾಲನೆ ನೀಡುವರು’ ಇದೇ ವೇಳೆ ಜಿಲ್ಲಾ ರೋಟರಿ ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್ ಸಹಿತ ವಿವಿಧ ನಾಯಕರು ಭಾಗವಹಿಸಲಿದ್ದು, ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಬಹುಮಾನ ವಿತರಿಸುವರು. ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು, ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತಿತರ ಗಣ್ಯರು ಭಾಗವಹಿಸುವರು. ಈ ಕಂಬಳ ಕೂಟದಲ್ಲಿ ಸುಮಾರು 150ಕ್ಕೂ ಮಿಕ್ಕಿ ಜೋಡಿ ಹಗ್ಗ ಕಿರಿಯ, ನೇಗಿಲು ಕಿರಿಯ ಮತ್ತು ಸಬ್ ಜ್ಯೂನಿಯರ್ ಕೋಣಗಳು ಭಾಗವಹಿಸಲಿದೆ ಎಂದು ಅವರು ತಿಳಿಸಿದರು.
‘
ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡೀಸದ ಮಾತನಾಡಿ, ‘ಪ್ರತೀ ವರ್ಷ ಎಲ್ಲಾ ರೋಟರಿ ಕ್ಲಬ್ ತಲಾ ರೂ 20 ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗೆ ವಿನಿಯೋಗಿಸುತ್ತಿದೆ’ ಎಂದರು.
ಕ್ಲಬ್ಬಿನ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ‘ಸಬ್ ಜ್ಯೂನಿಯರ್ ವಿಭಾಗದಲ್ಲಿ ‘ರೋಟರಿ ಕಂಬಳ’ ಆಯೋಜನೆ ಬಳಿಕ ಸಾವಯವ ಕೃಷಿ ಮತ್ತು ಕೋಣಗಳನ್ನು ಸಾಕುವ ರೈತರ ಸಂಖ್ಯೆ ಹೆಚ್ಚಳಗೊಂಡಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ನಾಯಕ ನಾರಾಯಣ ಹೆಗ್ಡೆ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆನಾರ್ಂಡಿಸ್, ಲೊರೆಟ್ಟೊ ಹಿಲ್ಸ್ ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಉಪಸ್ಥಿತರಿದ್ದರು



