ಮಂಗಳೂರು: ದರೋಡೆ ಮತ್ತು ಕೋಮು ಗಲಭೆಗೆ ಸಂಚು ಹೂಡಿದ್ದ ಆರೋಪದಲ್ಲಿ ಗುರುಪುರ ನಿವಾಸಿಗಳಾದ ಅಶ್ಫಾಕ್(೨೪) ಹಾಗೂ ಮುಹಮ್ಮದ್ ರಫೀಕ್ ಅಲಿಯಾಸ್ ತೋಟೆ ರಫೀಕ್(೪೨) ಎಂಬವರನ್ನು ಕದ್ರಿ ಠಾಣಾ ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನ ಕಾರ್ಯಾಚರಣೆಯ ಸಂದರ್ಭ ಇವರ ಜೊತೆಗಿದ್ದ ಆರು ಮಂದಿ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಂಧಿತರಿಂದ ಒಂದು ಮಚ್ಚು, ಫೇಕ್ ರಿವಾಲ್ವರ್, ಜೀವಂತ ಬುಲೆಟ್, ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಅಶ್ಫಾಕ್ ಈ ಹಿಂದೆ ಕೋಮು ಗಲಭೆಯ ಸಂದರ್ಭ ಚೂರಿ ಇರಿತ ಪ್ರಕರಣದ ಆರೋಪಿಯಾಗಿದ್ದು, ಜಾಮೀನಿನಲ್ಲಿ ಹೊರಬಂದು ವಿದೇಶಕ್ಕೆ ಪರಾರಿಯಾಗಿದ್ದ. ಬಳಿಕ ವಿದೇಶದಿಂದ ಹೊರಬಂದು ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.
ಬಂಧಿತರು ಉಳಾಯಿಬೆಟ್ಟುವಿನಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಂಘಟನೆಗಳ ಪ್ರತಿಭಟನೆಯ ಸಂದರ್ಭ ಕೋಮು ಗಲಭೆ ಸೃಷ್ಟಿಸಲು ಸಂಚು ಹೂಡಿದ್ದರೆನ್ನಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.



