ಗುರುಪುರ : ಇಲ್ಲಿನ ಗೋಳಿದಡಿ ಗುತ್ತಿನ ಮನೆಯಲ್ಲಿ ಸೆ. ೭ರಂದು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ನಾಗವೃಜ ಕ್ಷೇತ್ರದ ಶ್ರೀ ದೇವರ ವಾರ್ಷಿಕ ತ್ರಿಕಾಲ ಪೂಜೆ ಸಕಲ ಸಡಗರದಿಂದ ವಿಧಿವತ್ತಾಗಿ ನಡೆಯಿತು.

ಶ್ರೀ ಕ್ಷೇತ್ರ ಪಾವಂಜೆಯ ಧರ್ಮದರ್ಶಿ ಡಾ. ಯಾಜಿ ನಿರಂಜನ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗಿನ ಪೂಜೆ ನಡೆದರೆ, ಶ್ರೀ ಕ್ಷೇತ್ರದ ನರೇಶ್ ರಾವ್ ಎರ್ಮಾಳ್ ಅವರು ಮಧ್ಯಾಹ್ನದ ಪೂಜೆ ನಡೆಸಿಕೊಟ್ಟರು. ಗೋಳಿದಡಿ ಗುತ್ತಿನ ಯಜಮಾನ-ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಅವರ ಪತ್ನಿ ಉಷಾ ವರ್ಧಮಾನ ಶೆಟ್ಟಿ ಹಾಗೂ ನಾಲ್ವರು ಪುತ್ರಿಯರು ಪೂಜೆಯ ದೀಕ್ಷೆ ಕೈಗೊಂಡಿದ್ದರು.

ಮಧ್ಯಾಹ್ನದ ಪೂಜೆಯ ಬಳಿಕ ಶ್ರೀ ದೇವರು ಶ್ರೀ ಕ್ಷೇತ್ರ ಪಾವಂಜೆಗೆ ನಿರ್ಗಮಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಹಲವು ಗುತ್ತಿನ ಯಜಮಾನರು, ಗಡಿಕಾರರು, ಗುತ್ತಿನ ಚಾವಡಿ ಮಿತ್ರರು, ಹಿತೈಷಿಗಳು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಮಧ್ಯಾಹ್ನ ಶ್ರೀ ದೇವರ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆಯಾಯಿತು.
