ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯುತ್ ಜಾಲದ ಬೆನ್ನೆಲುಬುಗಳು, ರಾತ್ರಿ-ಹಗಲು, ಮಳೆ-ಗಾಳಿ ಎನ್ನದೆ ಅವಿರತ ಶ್ರಮಿಸುತ್ತಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಪವರ್ಮ್ಯಾನ್ಗಳೊಂದಿಗೆ ರಕ್ಷಾಬಂಧನ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, “ರಕ್ಷಾಬಂಧನ ಎಂದರೆ ನೂರಾರು ನೂಲುಗಳನ್ನು ಒಂದು ದಾರದೊಂದಿಗೆ ಜೋಡಿಸಿದಂತೆ ನಾವು ಪರಸ್ಪರ ಒಟ್ಟಾಗಿರಬೇಕು, ಒಂದಾಗಿರಬೇಕು, ಎನ್ನುವ ಭಾವನೆ ಮೂಡಿಸುವ ವಿಶೇಷ ಹಬ್ಬ. ನಾನು ನಿನ್ನನ್ನು ರಕ್ಷಣೆ ಮಾಡುತ್ತೇನೆ ನೀನು ನನ್ನ ರಕ್ಷಣೆ ಮಾಡಬೇಕು ಎಂಬ ಭಾವನೆಯಲ್ಲಿ ಒಟ್ಟಾದಾಗ ಅದರಲ್ಲಿ ಅದ್ಭುತವಾದ ಶಕ್ತಿ ಇದೆ ಎಂದರು.

ಎಲ್ಲರಿಗೂ ಒಳಿತಾಗಬೇಕು ಎಂದು ಬಯಸುವ ನಾವು ಜಾತಿ, ಮತ, ಭಾಷೆ ಬೇರೆ-ಬೇರೆಯಾದರು ನಾವೆಲ್ಲರೂ ಒಂದು- ಬಂಧು ಮತ್ತು ಹಿಂದೂಗಳಾಗಿದ್ದವೆ ಎಂದ ಅವರು ಸಹೋದರ-ಸಹೋದರಿಯ ಭಾತೃತ್ವವನ್ನು ತೋರಿಸುವ ಈ ಆಚರಣೆಯು ಎಲ್ಲಾ ಹಬ್ಬಗಳಿಗಿಂತಲೂ ವಿಶೇಷವಾದುದು ಎಂದು ಹೇಳಿದರು.

ಈ ಸಂದರ್ಭ ಪವರ್ಮ್ಯಾನ್ಗಳನ್ನು ಶಾಲು ಹೊದಿಸಿ ಭಾರತಮಾತೆಯ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಧ್ಯಾಪಕವೃಂದದವರು ಆರತಿ ಬೆಳಗಿ, ತಿಲಕಧಾರಣೆ ಮಾಡಿದರು. ವಿದ್ಯಾರ್ಥಿಗಳು ವೇದಿಕೆಯಲ್ಲಿದ್ದ ಅತಿಥಿಗಳಿಗೆ ರಕ್ಷಾಧಾರಣೆ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸಮೂಹ ಗೀತೆ ಹಾಡಿದರು. ನಂತರ ವಿದ್ಯಾರ್ಥಿಗಳಿಂದ ಪರಸ್ಪರ ರಕ್ಷಾಧಾರಣೆ ನಡೆಯಿತು.

ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಶಾಖಾಧಿಕಾರಿಯಾದ ಮಹಾಬಲ ಬಿ ಮಾತನಾಡಿ, ಕಾಲಮಿತಿಯಿಲ್ಲದ ಕೆಲಸದ ಒತ್ತಡದ ಅವಧಿಯಲ್ಲು ಈ ಕಾರ್ಯಕ್ರಮ ನಮಗೆ ಖುಷಿ ಕೊಟ್ಟಿದೆ. ರಕ್ಷಾಬಂಧನದ ಚರಿತ್ರೆ ಮಹಾಭಾರತದಲ್ಲೂ ಇದೆ, ರಕ್ಷಾಬಂಧನ ದ್ವೇಷ ಇಲ್ಲದೆ ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬುದನ್ನು ತಿಳಿಸುತ್ತದೆ ಎಂದರು. ವಿದ್ಯುತ್ ಸುರಕ್ಷತೆಯ ಬಗ್ಗೆ, ವಿದ್ಯುತ್ ಅವಘಡಗಳಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯುಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬಂಟ್ವಾಳ ವಿದ್ಯುತ್ ಗುತ್ತಿಗೆದಾರ ದಿವಾಕರ ಚೆಂಡೆ, ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯ ಮೆಕ್ಯಾನಿಕ-೨ ರಾಜೇಂದ್ರ, ಪವರ್ಮೆನ್ಗಳಾದ ಲವ, ವಸಂತ, ಹರೀಶ, ಶಿವಶರಣ, ಸಂಜಯ, ಮಧುಸೂದನ, ಶ್ರೀನಿವಾಸ, ಶ್ರೀರಾಮ ವಿದ್ಯಾಕೆಂದ್ರದ ಸಂಚಾಲಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ, ಚಾರಿತ್ರ್ಯ ಆರ್ ಡಿ ವಂದಿಸಿದಳು. ಬಿ.ರವಿಕಾಂತ್ ಕಾರ್ಯಕ್ರಮ ನಿರೂಪಿಸಿದರು.
