ಬಂಟ್ವಾಳ: ತೌಳವ ಸಂಸ್ಕೃತಿಯಲ್ಲಿ ‘ಆಟಿ’ ತಿಂಗಳು ವಿಶೇಷತೆಗಳಿಂದ ಕೂಡಿದ ಮಾಸವಾಗಿದೆ. ಪ್ರಕೃತಿಯಲ್ಲಿ ಬದುಕುವ ಮಾನವ ಪ್ರಕೃತಿಯೆಡೆಗೆ ಸಾಗುವ ದಿನಗಳಾಗಿದ್ದು, ನಮ್ಮ ಪರಿಸರದಲ್ಲಿ ಬೆಳೆದ ಫಲವಸ್ತು,ತರಕಾರಿಗಳು ಅವನ ಆಹಾರವಾಗಿವೆ. ಅವು ಅವನ ಆರೋಗ್ಯಕ್ಕೆ ಪೂರಕವಾಗಿವೆ ಎಂದು ವಿದ್ಯಾಗಿರಿಯ ಶ್ರೀ ವೆಂಕಟರಮಣ ಸ್ವಾಮೀ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕ ಪರಮೇಶ್ವರ ಜಿ ಹೆಗ್ಡೆ ಹೇಳಿದರು.

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ‘ಕೆಸರ್ಡೊಂಜಿ ದಿನ’ ಎಂಬ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಹೂ ಅರಳಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಕಾಲದ ವಿದ್ಯಾರ್ಥಿಗಳು ಈ ಸಂಸ್ಕೃತಿಯನ್ನು ಅರಿಯುವಲ್ಲಿ ಇಂತಹ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕರಾದ ಹರಿಪ್ರಸಾದ್ ರವರು ಮಾತನಾಡಿ ಆಟಿ ತಿಂಗಳ ವಿವಿಧ ಆಚರಣೆಗಳು, ಆಹಾರ ಪದ್ದತಿಗಳನ್ನು ವಿದ್ಯಾವಂತರೆನಿಸಿದವರು ತಿಳಿದು ಅಳವಡಿಸಿಕೊಂಡು ಮುಂದುವರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೆಂಕಟರಮಣ ಸ್ವಾಮೀ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಡಿ ಮಂಚಿ ಮಾತನಾಡಿ ಆಟಿ ತಿಂಗಳ ಇಂತಹ ಆಚರಣೆಗಳ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿಯುವಲ್ಲಿ ‘ಕೆಸರ್ಡೊಂಜಿ ದಿನ’ ಕಾರ್ಯಕ್ರಮ ಪ್ರಮುಖ ಪಾತ್ರವಹಿಸುತ್ತವೆ. ಕೆಸರಿನೊಂದಿಗಿನ ಆಟವು ಆತನ ಉತ್ತಮ ಆರೋಗ್ಯಕ್ಕೆ ಸಹಕಾರಿ. ತುಳುನಾಡಿನಲ್ಲಿರುವ ಸಂದಿ ಪಾಡ್ದನಗಳು ಈ ನೆಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ, ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅಖಿಲಾ ಪೈ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೈಲೆಶ್ ಶೆಟ್ಟಿ ಸ್ವಾಗತಿಸಿ , ವೀಕ್ಷಿತಾ ಗಟ್ಟಿ ವಂದಿಸಿದರು. ರಕ್ಷಿತ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದದರು. ತದನಂತರ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು ನಡೆಯಿತು. ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
