ಕೈಕಂಬ: ಎಪ್ರಿಲ್‌ನಲ್ಲಿ ಶತಮಾನೋತ್ಸವ ಆಚರಿಸಿದ್ದ ವಾಮಂಜೂರಿನ ತಿರುವೈಲು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭತ್ತದ ಬೀಜ ಬಿತ್ತಿ ಬೆಳೆಸಲಾಗಿದ್ದ ನೇಜಿಯನ್ನು ಶಾಲಾ ಮಕ್ಕಳು ಆ. ೪ರಂದು ಕೆತ್ತಿಕಲ್‌ನ ಸಾಲ್ಯಾನ್ ಪರಿವಾರದವರ ೧೫ ಸೆಂಟ್ಸ್ ಗದ್ದೆಯಲ್ಲಿ ನಾಟಿ ಮಾಡಿ ಸಂಭ್ರಮಿಸಿದರು.

ಶಾಲಾ `ಮಕ್ಕಳ ಬೇಸಾಯ’ ಕಾರ್ಯಕ್ರಮದಡಿ ಮಕ್ಕಳಿಗೆ ಭತ್ತದ ಬೇಸಾಯದ ಅನುಭವ ನೀಡುವ ಉದ್ದೇಶಕ್ಕಾಗಿ ಶಾಲಾ ಮೈದಾನದಲ್ಲಿ ೪ ಸೇರು ಭತ್ತದ ಬೀಜ ಬಿತ್ತಲಾಗಿತ್ತು. ಆ. ೨ರಂದು(ಶನಿವಾರ) ಶಾಲಾ ಮಕ್ಕಳು ನೇಜಿ ಕಿತ್ತು ಸೂಡಿ ಮಾಡಿ ಗದ್ದೆಗೆ ಕೊಂಡೊಯ್ದಿದ್ದರು.

ಮೊದಲೇ ಉತ್ತು ಹದ ಮಾಡಲಾಗಿದ್ದ ಗದ್ದೆಯಲ್ಲಿ ಸೋಮವಾರ(ಆ. ೪) ಬಾಬು ಸಾಲ್ಯಾನ್ ಅವರು ಬೊಂಡAತಿಲ ಗ್ರಾಮದ ಧರಣದ ಕಿರಣ್ ಎಂಬವರ ಕಂಬಳದ ಕೋಣಗಳ ಸಹಾಯದಿಂದ ಗದ್ದೆಯಲ್ಲಿ ಮರು ಉಳುಮೆ ಮಾಡಿದರು.

ಗದ್ದೆಗೆ ತೆಂಗಿನಕಾಯಿ ಒಡೆದು ಮುಹೂರ್ತ ನಡೆಸಲಾಯಿತು. ಬಳಿಕ ಭತ್ತದ ನಾಟಿಕೂಲಿ ಯಾಳುಗಳಾದ ಜಾನಕಿ ಮತ್ತು ಸುಶೀಲಾ ಅವರ ಸಹಕಾರದಲ್ಲಿ ಶಾಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕಿಯರು, ತಿರುವೈಲು ವಾರ್ಡ್ನ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ನಿವೃತ್ತ ಶಿಕ್ಷಕಿ ಪುಷ್ಪಲತಾ, ನಿವೃತ್ತ ಶಿಕ್ಷಕ ಗೋಪಾಲ್ ಯು, ಸ್ಟ್ಯಾನಿ ಕುಟಿನ್ಹೊ, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್(ರಿ) ಅಧ್ಯಕ್ಷ ರಘು ಸಾಲ್ಯಾನ್, ರಾಜು ಸಾಲ್ಯಾನ್, ಸಾಲ್ಯಾನ್ ಪರಿಜನರು ಹಾಗೂ ಸ್ಥಳೀಯರು ನೇಜಿ ನಾಟಿ ಮಾಡಿದರು.

ಮುಂದೆ ಶಾಲಾ ಮಕ್ಕಳೇ ಭತ್ತದ ಕಟಾವು ಮಾಡಲಿದ್ದಾರೆ. ನಂತರ `ಹಲ್ಲರ್’ಗೆ ಹಾಕಲಾಗುವ ಭತ್ತದಿಂದ ಬರುವ ಎಲ್ಲ ಅಕ್ಕಿಯನ್ನು ಶಾಲಾ ಮಕ್ಕಳ ಬಿಸಿಯೂಟಕ್ಕೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿ ಹಾಗೂ ಪದಾಧಿಕಾರಿಗಳು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಆಚಾರ್ಯ, ಉಪಾಧ್ಯಕ್ಷ ಅಶೋಕ್ ಅಮೀನ್ ಹಾಗೂ ಪದಾಧಿಕಾರಿಗಳು, ಜೈ ಶಂಕರ್ ಮಿತ್ರ ಮಂಡಳಿಯ ಮಾತೃ ಮಂಡಳಿ ಸದಸ್ಯೆಯರು, ರಾಜೀವ ಎಸ್. ಪೂಜಾರಿ ಕೊಳಕೆಬೈಲು, ಅನಿಲ್ ರೈ, ದಿನೇಶ್ ಜೆ. ಕರ್ಕೇರ ಸಾನದಮನೆ, ದಿವಾಕರ ಆಚಾರ್ಯ ವಾಮಂಜೂರು ಮತ್ತಿತರರು ಇದ್ದರು

By suddi9

Leave a Reply

Your email address will not be published. Required fields are marked *