ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಹಾಗೂ ಬಿಜೆಪಿ ಶಾಸಕರ ನಿಯೋಗ ಬುಧವಾರ ವಾಣಿಜ್ಯ ಮತ್ತು ಕೈಗಾರಿಕೆ, ಎಂಎಸ್ಎಂಇ ಮತ್ತು ಗಣಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲಾ ಐಎಎಸ್ ಅವರನ್ನು ಬುಧವಾರ ಬೆಂಗಳೂರಿನಲ್ಲಿ ಭೇಟಿ ಮಾಡಿಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿತು.

ಈ ಸಂದರ್ಭ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲಿನ ಮೇಲಿರುವ ನಿಷೇಧದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆ ಹಾಗಯೇ ಇದನ್ನೇ ನಂಬಿರುವ ಕೂಲಿ ಕಾರ್ಮಿಕರು,ಮೇಸ್ತ್ರೀಗಳು ಸಹಿತ ಇದಕ್ಕೆ ಸಂಬಂಧಿಸಿದ ಕಾರ್ಮಿಕರು ಬೀದಿಪಾಲಾಗುವ ಸಾಧ್ಯತೆಯನ್ನು ವಿವರಿಸಿ ಇದಕ್ಕೆ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ನಿಯೋಗದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ,ಶಾಸಕರುಗಳಾದ ಹರೀಶ್ ಪೂಂಜಾ,ಉಮಾನಾಥ ಕೋಟ್ಯಾನ್,ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ,ಭಾಗಿರಥಿ ಮುರುಳ್ಯ, ವಿ.ಪ.ಸದಸ್ಯರಾದ ಪ್ರತಾಪಸಿಂಹ ನಾಯಕ್,ಕಿಶೋರ್ ಕುಮಾರ್ ಬೋಟ್ಯಾಡಿ,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಪ್ರ.ಕಾರ್ಯದರ್ಶಿ ಯತೀಶ್ ಮೊದಲಾದವರಿದ್ದರು.
ಇದಕ್ಕು ಮೊದಲು ಈ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿತ್ತು.
