ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ತನ್ನ ಕಾರ್ಯ ವ್ಯಾಪ್ತಿಯ ಸದಸ್ಯ ಕೃಷಿಕರಿಗೆ ಅನುಕೂಲವಾಗಲು ಹಾಗೂ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಹಾಗೂ ಪ್ರತಿಷ್ಟಿತ ಸಂಸ್ಥೆಯ ಬ್ಲೂಸಿ ಮೈಲುತುತ್ತನ್ನು ಸಬ್ಸಿಡಿ ರೂಪದಲ್ಲಿ ವಿತರಿಸುವುದು ಮತ್ತು ರೈತರಿಗೆ ಬೇಕಾಗುವ ರಸಗೊಬ್ಬರ , ಕೀಟನಾಶಕ, ಸಾವಯವ ಗೊಬ್ಬರ , ಸುಣ್ಣ ಇತ್ಯಾದಿಗೆ ಒಂದು ಎಕ್ರೆಗೆ 25 ಸಾ.ರೂ. ವಿನಂತೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ .

ಮೈಲುತುತ್ತನ್ನು ಕೃಷಿಕರು ಹೊಂದಿರುವ ಅಡಿಕೆ ತೋಟದ ಜಮೀನಿನ ಆಧಾರದಲ್ಲಿ ವಿತರಣೆ ಮಾಡಲಾಗುವುದು, ಅದೇ ರೀತಿಯಲ್ಲಿ ರಸಗೊಬ್ಬರ , ಕೀಟನಾಶಕ , ಸಾವಯವ ಗೊಬ್ಬರ , ಸುಣ್ಣ,ಮೈಲುತುತ್ತು ಖರೀದಿ ಮಾಡಲು ಪ್ರತಿ ಎಕ್ರೆಗೆ 25 ಸಾ.ರೂ.ವಿನಂತೆ ಗರಿಷ್ಠ 75 ಸಾವಿರದವರೆಗೆ 1 ವರ್ಷದ ಅವಧಿಗೆ ಸಾಲವನ್ನು ನೀಡಲಾಗುತ್ತದೆ ಎಂದು ಅವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೊಳೆ ರೋಗದ ಭಾಧೆಯಿಂದಾಗಿ ಅಡಿಕೆ ಬೆಳೆಗಾರರು ತುಂಬಾ ನಷ್ಟವನ್ನು ಅನುಭವಿಸಿದರಿಂದ ಸಂಘದ ವತಿಯಿಂದ ಕೃಷಿಕರಿಗೆ ಸ್ಪಂದನೆ ನೀಡುವ ಉದ್ದೇಶದಿಂದ ಸಂಘದ ಆಡಳಿತ ಸಮಿತಿ ಈ ಯೋಜನೆ ರೂಪಿಸಿದೆ ಎಂದು ಅವರು ತಿಳಿಸಿದ್ದಾರೆ.
ಸಂಘದ ವ್ಯಾಪ್ತಿಯಲ್ಲಿನ ಕೃಷಿಕರು ಸಂಘದ ಸಿದ್ದಕಟ್ಟೆ ಕೇಂದ್ರ ಕಛೇರಿ ಸಂಪರ್ಕಿಸಿ ಇದರ ಪ್ರಯೋಜನವನ್ನು ಪಡೆಯುವಂತೆ ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ , ನಿರ್ದೇಶಕರಾದ ಸತೀಶ್ ಪೂಜಾರಿ ,ದಿನೇಶ್ ಪೂಜಾರಿ , ರಶ್ಮಿತ್ ಶೆಟ್ಟಿ ,ಚಂದ್ರಶೇಖರ ಶೆಟ್ಟಿ , ಜಾರಪ್ಪ ನಾಯ್ಕ ,ವೀರಪ್ಪ ಪರವ , ವಿಶ್ವನಾಥ ಶೆಟ್ಟಿಗಾರ್ , ಎ. ಶಿವಗೌಡ , ಮಂದಾರತಿ ಎಸ್ ಶೆಟ್ಟಿ , ಪುಷ್ಪಲತಾ ಎಸ್ ಆರ್ ಉಪಸ್ಥಿತರಿದ್ದರು . ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ವಂದಿಸಿದರು.
