ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಬಂಟ್ವಾಳ ತಾಲೂಕು ಘಟಕದ ದ್ವಿತೀಯ ವಾರ್ಷಿಕೋತ್ಸವ, ಹಿರಿಯ ಕಲಾವಿದರಿಬ್ಬರಿಗೆ ಸನ್ಮಾನ
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಬಂಟ್ವಾಳ ತಾಲೂಕು ಘಟಕದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ವಠಾರದಲ್ಲಿ ಗುರುವಾರ ಸಂಜೆ ನಡೆಯಿತು.

ಈ ಸಂದರ್ಭ ಯಕ್ಷರಂಗದ ಮೇರುಕಲಾವಿದ ದಶಾವತಾರಿ ಖ್ಯಾತಿಯ ಕೆ.ಗೋವಿಂದ ಭಟ್ ಸೂರಿಕುಮೇರು ಹಾಗೂ ರಂಗಭೂಮಿಯ ಹಿರಿಯ ಕಲಾವಿದ ಡಿ.ಎಸ್.ಬೋಳೂರು ಅವರನ್ನು ಸನ್ಮಾನಿಸಲಾಯಿತು.
ಅದೇರೀತಿ ಭಾಗವತಿಕೆಯಲ್ಲಿ 25 ವರ್ಷ ಪೂರೈಸಿದ ಪಟ್ಲಪೌಂಡೇಶನ್ ನ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ ಅವರನ್ನು ಅಭಿನಂದಿಸಲಾಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಸನ್ಮಾನ ಕಾರ್ಯ ನೆರವೇರಿಸಿ ಮಾತನಾಡಿ ಕಲೆ, ಸಂಸ್ಕೃತಿ ಉಳಿವಿಗೆ ಯಕ್ಷಗಾನ ಕರಾವಳಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದು, ಪಟ್ಲ ಫೌಂಡೇಶನ್ ಕಾರ್ಯ ಸ್ತುತ್ಯರ್ಹ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ತಾಪಕ, ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ,ಯಕ್ಷಗಾನ ಸಹಿತ ವಿವಿಧ ಕಲಾರಂಗದಲ್ಲಿ ದುಡಿದಹಿರಿಯ ಕಲಾವಿದರುಗಳ ಕಣ್ಣೀರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆರಂಭಿಸಲಾದ ಯಕ್ಷದ್ರುವ ಪಟ್ಲ ಪೌಂಡೇಶನ್ ನಿಂದ ವಿವಿಧ ದಾನಿಗಳ ಸಹಕಾರದಿಂದ 34 ಮಂದಿ ರಂಗಪ್ರವೇಶ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.20 ಮನೆಗಳು ಪ್ರಗತಿಯಲ್ಲಿದೆ ಎಂದರು. ವಿವಿಧ ಜನಪ್ರತಿನಿಧಿಗಳು,ಕೊಡುಗೈ ದಾನಿಗಳ ಸಹಕಾರವನ್ನು ಸ್ಮರಿಸಿದ ಸತೀಶ್ ಶೆಟ್ಟಿಯವರು ರಾಜ್ಯದ ಸರಕಾರಿ ಶಾಲೆಯ 10 ಸಾವಿರಕ್ಕು ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಶಿಕ್ಷಣದ ತರಬೇತಿ ನೀಡಲಾಗಿದೆ.ಇತ್ತೀಚೆಗಷ್ಟೆ ಬಂಟ್ವಾಳ ತಾಲೂಕಿನ ವಿವಿಧ ಸರಕಾರಿ ಶಾಲೆಯ 1000 ವಿದ್ಯಾರ್ಥಿಗಳು ರಂಗಪ್ರವೇಶಗೈದಿದ್ದಾರೆ ಎಂದರು.
ಬಂಟ್ವಾಳ ಘಟಕದ ಅಧ್ಯಕ್ಷ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳ ತಾಲೂಕಿನ ಕರೋಪಾಡಿಗ್ರಾಮದ ಪಟ್ಲ ಎಂಬಲ್ಲಿನ ಸತೀಶ್ ಶೆಟ್ಟಿ ಪಟ್ಲ ಅವರು ನಮ್ಮ ತಾಲೂಕಿನವರೇ ಆಗಿರುವುದು ಹೆಮ್ಮೆಯ ಸಂಗತಿ,ಭಾಗವತಿಕೆಯಲ್ಲಿ 25 ವರ್ಷ ಪೂರೈಸಿರುವ ಅವರು ಯಕ್ಷಗಾನದ ಕಂಪನ್ನು ಇಡೀ ಜಗತ್ತಿಗೆ ಪಸರಿಸಿದ್ದಾರೆ ಎಂದರು.
ಸಂಚಾಲಕ ಭುವನೇಶ್ ಪಚ್ಚಿನಡ್ಕ, ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಉಪಾಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಭುಜಂಗ ಸಾಲಿಯಾನ್, ಜಯಪ್ರಕಾಶ್, ಕೋಶಾಧಿಕಾರಿ ಶಂಕರ ಶೆಟ್ಟಿ ಪರಾರಿ ಉಪಸ್ಥಿತರಿದ್ದರು.
ಈ ಸಂದರ್ಭ ಕಾರ್ಯದರ್ಶಿ ಮೋಹನದಾಸ ಕೊಟ್ಟಾರಿ ಹಾಗೂ ಪತ್ರಕರ್ತ, ಕಲಾವಿದ ರತ್ನದೇವ ಪುಂಜಾಲಕಟ್ಟೆ ಸನ್ಮಾನಿತರ ಸನ್ಮಾನಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಪಾವಂಜೆ ಮೇಳದಿಂದ ಭಾರತ ವರ್ಷಿಣಿ ಯಕ್ಷಗಾನ ಪ್ರದರ್ಶನ ನಡೆಯಿತು.