ದಡ್ಡಲಕಾಡು ಸ. ಹಿ. ಪ್ರಾ. ಶಾಲೆಯ ದತ್ತು ಸ್ವೀಕಾರದ ಒಪ್ಪಂದ ನವೀಕರಣಕ್ಕೆ ಅನಗತ್ಯ ವಿಳಂಬ ಧೋರಣೆ ಸರಕಾರದ ಗಮನಸೆಳೆದ ಬಂಟ್ವಾಳ ಶಾಸಕರಾ ರಾಜೇಶ್ ನಾಯ್ಕ್
ಬಂಟ್ವಾಳ : ತಾಲೂಕಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರದ ಒಪ್ಪಂದ ನವೀಕರಣಕ್ಕೆ ಅನಗತ್ಯ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಕುರಿತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿ ದರು.

1976 ರಲ್ಲಿ ಸ್ಥಾಪನೆಯಾದ ಏಕೋಪಾಧ್ಯಾಯ ಶಾಲೆಯಲ್ಲಿ ಕ್ರಮೇಣ 28 ವಿದ್ಯಾರ್ಥಿಗಳಿದ್ದು,ಇಬ್ಬರ ಶಿಕ್ಷಕಿಯರನ್ನು ಹೊಂದಿತ್ತು.ಮುಂದುವರಿದು ಈ ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದಾಗ ಇಲ್ಲಿನ ಹಳೇ ವಿದ್ಯಾರ್ಥಿಗಳು ಶ್ರೀ ದುರ್ಗಾಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ದತ್ತು ಸ್ವೀಕರಿಸಿತ್ತು.ತಮ್ಮ ಮಕ್ಕಳನ್ನೇ ಈ ಶಾಲೆಗೆ ಸೇರ್ಪಡೆಗೊಳಿಸಿ ಮಾದರಿಯಾಗಿದ್ದರು ಎಂದು ಶಾಸಕರು ವಿಧಾನಸಭೆಯಲ್ಲಿ ಸರಕಾರದ ಗಮನಸೆಳೆದರು .
ಬಳಿಕ ಈ ಶಾಲೆ ಹಂತ,ಹಂತವಾಗಿ ಅಭಿವೃದ್ಧಿಯನ್ನು ಕಂಡಿತು.ಸುಮಾರು 2 ಕೋ.ರೂ.ವೆಚ್ಚದಲ್ಲಿ ಸರಕಾರದ ಹಾಗೂ ಸಿಎಸ್ ಆರ್ ನಿಧಿಯನ್ನು ಬಳಸಿಕೊಂಡು ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ.ಶಾಲಾ ಮಕ್ಕಳಿಗೆ ವಾಹನ ಸೇರಿದಂತೆ ಪ್ರಸ್ತುತ ಸಕಲ ವ್ಯವಸ್ಥೆಯನ್ನು ತನ್ನ ಕ್ಷೇತ್ರದ ಗ್ರಾಮೀಣ ಭಾಗದಲ್ಲಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಸಾಲೆ ಹೊಂದಿದ್ದು,1040 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ವಿಧಾನಸಭೆಯಲ್ಲಿ ವಿವರಿಸಿದರು.
ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಅಭಿವೃದ್ಧಿಗೂ ಅನುದಾನವನ್ನು ಸರಕಾರ ನೀಡದಿದ್ದರೂ, ವಿಧ್ಯಾಭಿಮಾನಿಗಳು ಸಹಿತ ದಾನಿಗಳ ನೆರವು ಪಡೆದು ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿ ಈ ಸರಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. 2024 ರಲ್ಲಿ ಈ ಶಾಲೆ ದತ್ತು ಸ್ವೀಕಾರ ಒಪ್ಪಂದದ ಅವಧಿ ಮುಕ್ತಾಯವಾಗಿದ್ದು,ಶಿಕ್ಷಣ ಇಲಾಖೆ ಇದರ ನವೀಕರಣಕ್ಕೆ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ಸ್ಥಾಪಿತ ಹಿತಾಸಕ್ತಿಗಳು ಇತ್ತೀಚೆಗೆ ಶಾಲೆಯ ವಿರುದ್ದ ಅವ್ಯವಹಾರ ಸಹಿತ ವಿವಿಧ ಅಪಾದನೆಗಳನ್ನು ಮಾಡಿರುವ ಬಗ್ಗೆ ಗಮನಕ್ಕೆ ಬಂದಿದ್ದು,ಶಾಲಾ ಟ್ರಸ್ಟೊಂದು ಅದ್ಯಾವ ರೀತಿ ಅವ್ಯವಹಾರ ನಡೆಸಲು ಸಾಧ್ಯ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.ಆದರೂ
ಈ ಬಗ್ಗೆ ಡಿಡಿಪಿಐ ಅವರ ನೇತೃತ್ವದ ತಂಡ ತನಿಖೆ ನಡೆಸಿದ್ದು,ಈ ಅರೋಪದಲ್ಲಿ ಹುರುಳಿಲ್ಲ,ಯಾವುದೇ ಅವ್ಯವಹಾರವು ಆಗಿಲ್ಲ ಎಂಬ ವರದಿ ನೀಡಿರುವ ಬಗ್ಗೆ ಮಾಹಿತಿಇದೆ ಎಂದು ಶಾಸಕರು ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಗಮನಕ್ಕೆ ತಂದರು.
ಮುಚ್ಚುವ ಹಂತದಲ್ಲಿ ದಡ್ಡಲಕಾಡು ಸರಕಾರಿ ಶಾಲೆ ಪ್ರಸ್ತುತ ಯಾವರೀತಿ ಇದೆ ಎಂಬುದನ್ನು ಪರಿಶೀಲಿಸಲು ಸದನ ಸಮಿತಿ ರಚಿಸುವಂತೆ ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಆಗ್ರಹಿಸಿದರು.