ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆ
ಬಂಟ್ವಾಳ: ರಾಷ್ಟೀಯ ಹಬ್ಬಗಳ ಆಚರಣಾ ತಾಲೂಕು ಸಮಿತಿ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಬಂಟ್ವಾಳ ಕ್ಷೇತ್ರ ಸಮಿತಿ ಸಹಯೋಗದೊಂದಿಗೆ ಬಿ.ಸಿ.ರೋಡಿನ ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆ ಗುರುವಾರ ನಡೆಯಿತು.

ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕಟ್ಟಡ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ನಾರಾಯಣ ಸಿ.ಪೆರ್ನೆ ವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಸರ್ವಜ್ಞ ಕವಿ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಸಂದೀಪ್ ಸಾಲ್ಯಾನ್, ಸರ್ವಜ್ಞನ ತ್ರಿಪದಿಗಳು ಶಾಲೆ ಪರೀಕ್ಷೆಗಷ್ಟೇ ಅಲ್ಲ, ಜೀವನ ಪರೀಕ್ಷೆಗೂ ಸಹಕಾರಿ. ಹದಿನಾರನೇ ಶತಮಾನದಲ್ಲಿ ಸರ್ವಜ್ಞ ಬರೆದ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿದ್ದು, ಅದು ಸಾರ್ವಕಾಲಿಕವಾಗಿದೆ. ಇದನ್ನು ಅಳವಡಿಸಿದವರ ಬದುಕು ಉತ್ಕೃಷ್ಟವಾಗುತ್ತದೆ ಎಂದು ಹೇಳಿದರು.
ಸರ್ವಜ್ಞ ಮಹಾನ್ ಸಂತನಾದ ಬಗೆ ವಿವರಿಸಿದ ಅವರು ಇಂದು ಸರ್ವಜ್ಞ ಜಯಂತಿ ಆಚರಣೆಯನ್ನು ಶಾಲೆಗಳಲ್ಲಿ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ, ನಿರಂತರವಾಗಿ ಸರ್ವಜ್ಞ ವಚನಗಳು ಹಾಗೂ ಅವುಗಳ ಸಾರವನ್ನು ಶಾಲಾ ಮಕ್ಕಳಿಗೆ ತಿಳಿಹೇಳುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕುಂಬಾರರ ಮಹಿಳಾ ಸಂಘ, ಬಂಟ್ವಾಳ ಅಧ್ಯಕ್ಷೆ ನಳಿನಿ ಮಹಾಬಲ, ಕುಲಾಲ ಯುವ ವೇದಿಕೆ ಮಹಿಳಾ ಅಧ್ಯಕ್ಷೆ ವಿಜಯಶ್ರೀ ಪುರುಷೋತ್ತಮ, ಯುವ ವೇದಿಕೆ ತಾಲೂಕು ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ಪ್ರಮುಖರಾದ ಸೋಮನಾಥ ಸಾಲಿಯಾನ್, ಕಂದಾಯ ನಿರೀಕ್ಷಕ ವಿಜಯ್ ಅರ್, ಚುನಾವಣೆ ಶಾಖೆ ವಿಷಯ ನಿರ್ವಾಹಕ ಮಂಜುನಾಥ ಕೆ ಎಚ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ಉಪಸ್ಥಿತರಿದ್ದರು. ಪ್ರಮುಖರಾದ ಲಕ್ಷ್ಮಣ ಕುಲಾಲ್ ಅಗ್ರಬೈಲ್ ವಂದಿಸಿದರು. ಬಂಟ್ವಾಳ ತಾಲೂಕು ಕಚೇರಿ ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.