Published On: Thu, Jan 23rd, 2025

ಪೊಳಲಿ ಸೇತುವೆ ದುರಸ್ಥಿಗೆ ಅನುದಾನ ನೀಡಿ, ಟೆಂಡರ್‌ ಪ್ರಕ್ರಿಯೆ ಮುಗಿದರೂ ಕಾಮಗಾರಿ ಆರಂಭಿಸಿಲ್ಲ: ಶಾಸಕ ರಾಜೇಶ್ ನಾಯ್ಕ್ ಗರಂ

ಬಂಟ್ವಾಳ: ಪೊಳಲಿ ಅಡ್ಡೂರು ಸೇತುವೆಯ ದುರಸ್ಥಿಗೆ ಈಗಾಗಲೇ 6.00 ಕೋ.ರೂ. ಅನುದಾನ ಬಿಡುಗಡೆಗೊಂಡು ಟೆಂಡರ್‌ ಪ್ರಕ್ರಿಯೆ ಮುಗಿದರೂ ಇನ್ನೂ ಕೂಡ ಕಾಮಗಾರಿ ಪ್ರಾರಂಭಿಸಿಲ್ಲ. ಈ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಬೆಂಗಳೂರಿನಲ್ಲಿ ನಡೆದ ಭರವಸೆಗಳ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭರವಸೆಗಳ ಸಮಿತಿ ಅಧ್ಯಕ್ಷರಾದ ಕೆ. ವೈ. ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಾಜೇಶ್‌ ನಾಯ್ಕ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕರ್ನಾಟಕ ವಿಧಾನ ಸಭೆಯ ಭರವಸೆಗಳ ಸಮಿತಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಬಗ್ಗೆ ಚರ್ಚೆಯ ವೇಳೆ ಶೀಥಿಲಾವಸ್ಥೆಯ ಪೊಳಲಿ ಸೇತುವೆ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳದ ಕುರಿತು ಗರಂ ಆದ ಶಾಸಕರು ಟೆಂಡರ್ ಪ್ರಕ್ರಿಯೇ ಮುಗಿದರೂ ಇನ್ನು ಕೂಡ ಕಾಮಗಾರಿ ಆರಂಭಿಸದಿರುವುದನ್ನು ಅಧಿಕಾರಿಗಳಲ್ಲಿ ಪ್ರಶ್ನಿಸಿದರಲ್ಲದೆ‌ ಸೇತುವೆಯಲ್ಲಿ ಘನವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಯ ಬಗ್ಗೆ ಗಮನಸೆಳೆದು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ. ಸತ್ಯನಾರಾಯಣ ಅವರು ಪೊಳಲಿ ಸೇತುವೆಯ ದುರಸ್ಥಿ ಕಾಮಗಾರಿಯನ್ನು ಮೂರು ದಿನಗಳ ಒಳಗಾಗಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಈ ಸೇತುವೆಯ ಪುನರ್‌ ನಿರ್ಮಾಣಕ್ಕಾಗಿ 50.00 ಕೋಟಿ ರೂ.ವಿನ ಪ್ರಸ್ತಾವನೆಯನ್ನು ಕೂಡ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ವಿಧಾನ ಸಭೆ ಸಚಿವಾಲಯ ಭರವಸೆಗಳ ಸಮಿತಿ ಅಧೀನ ಕಾರ್ಯದರ್ಶಿ ಎಸ್. ರಾಜಣ್ಣ, ಲೋಕೋಪಯೋಗಿ ಇಲಾಖೆ ಐಎಫ್‌ಎ ಡಾ. ಸೋಮನಾಥ್, ಕೆ.ಆರ್‌.ಡಿ.ಸಿ.ಎಲ್‌. ವ್ಯವಸ್ಥಾಪಕ ನಿರ್ದೇಶಕರಾದ ಲಿಂಗಮೂರ್ತಿ ಜಿ., ರಾಜ್ಯ ಹೆದ್ಧಾರಿ ಯೋಜನಾ ನಿರ್ದೇಶಕರಾದ ಜಗನ್ನಾಥ ಹಾಗೂ ಶಿವಮೊಗ್ಗ ಸರ್ಕಲ್‌ ಮತು ಮಂಗಳೂರು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ಆಗಸ್ಟ್ ನಿಂದ ಸಂಚಾರ ನಿರ್ಬಂಧಿಸಲಾಗಿತ್ತು:-

ಅಡ್ಡೂರು ಸೇತವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ದ.ಕ. ಜಿಲ್ಲಾಧಿಕಾರಿಯವರು ಈ ಸೇತುವೆಯಲ್ಲಿ ಬಸ್ ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದಾರೆ. ಬಸ್ಸು ಸಂಚಾರ ಇಲ್ಲದೆ ಪ್ರತಿನಿತ್ಯ ಶಾಲಾ- ಕಾಲೇಜು,ಕೆಲಸಕ್ಕೆ ತೆರಳುವ ಕಾರ್ಮಿಕರು,ಸಾರ್ವಜನಿಕರು ಹಾಗೂ ಪ್ರಸಿದ್ದ ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಮತ್ತು ಸ್ಥಳೀಯ ಪರಿಸರದವರಿಗೆ ತೊಂದರೆಯಾಗಿರುತ್ತದೆ. ಈ ಸೇತುವೆಯ ಪುನರ್ ನಿರ್ಮಾಣಕ್ಕೆ ರೂ. 50.00 ಕೋಟಿ ಬೇಕಾಗಿದ್ದು, ತಕ್ಷಣದ ಪರಿಹಾರಕ್ಕಾಗಿ ಸೇತುವೆ ದುರಸ್ಥಿಗೆ 6.00 ಕೋಟಿ ಅನುದಾನ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಮುಗಿದರೂ ಕಾಮಗಾರಿ ಮಾತ್ರ ಇನ್ನು ಆರಂಭವಾಗಿಲ್ಲ.

ಸೇತುವೆಯ ಧಾರಣಾ ಶಕ್ತಿಯನ್ನು ಯಂತ್ರದ ಮೂಲಕ ಪರೀಕ್ಷಿಸಲಾಗಿತ್ತು.ಘನವಾಹನ ಸಂಚಾರ ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಸೇತುವೆಯ ಎರಡೂ ತುದಿಗಳಲ್ಲಿ‌ ಅಡ್ಡಲಾಗಿ ಕಬ್ಬಿಣದ ಪಟ್ಟಿಯನ್ನು ಅಳವಡಿಸಿದ್ದಲ್ಲದೆ ಚೆಕ್ ಪೊಸ್ಟ್ ನಿರ್ಮಿಸಿ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು‌ನಿಯೋಜಿಸಲಾಗಿದೆ.ಹಾಗಿದ್ದು ಅಕ್ರಮ ಮರಳು ಸಾಗಾಟದ ಲಾರಿಗಳು ನಿರಂತರವಾಗಿ ಸಂಚರಿಸುತ್ತಿದೆಯೆಂಬ ದೂರುಗಳು ಇವೆ.‌ಅಡ್ಡಲಾಗಿ ನಿರ್ಮಿಸಲಾದ ವಾಹನಗಳ ಸಂಚಾರದ ಭರದಲ್ಲಿ ಕಬ್ಬಿಣದ ಪಟ್ಟಿಗೆ ಡಿಕ್ಕಿಯಾದ ಉದಾಹರಣೆಯು ಇದೆ.

ಈ ನಡುವೆ ಹೋರಾಟ ಸಮಿತಿಯೊಂದು‌ ಅಸ್ತಿತ್ವಕ್ಕೆ ಬಂದಿದ್ದು, ಸೇತುವೆಯಲ್ಲಿ ವಾಹನಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲವೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪೊಳಲಿ ಸುತ್ತಮತ್ತ ಬಂದ್ ಗೂ‌ ಕರೆ ನೀಡಿತ್ತು.ಈ‌ಸಂದರ್ಭ ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಬಂಟ್ವಾಳ ತಹಶೀಲ್ದಾರ್ ಹಾಗೂ ಪಿಡಬ್ಲ್ಯು ಅದ್ಇಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹೋರಾಟ ಸಮಿತಿಯ ಮನವೊಲಿಸಿ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿತ್ತು. ಆದರೆ ಪರ್ಯಾಯ ವ್ಯವಸ್ಥೆಯು ಇಲ್ಲ,ಸೇತುವೆ ದುರಸ್ಥಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್ ಆದರೂ ಕಾಮಗಾರಿ‌ ಆರಂಭವಾಗಿಲ್ಲ,ಇದೀಗ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳ ವಿಳಂಬ ಧೋರಣೆಗೆ ಗರಂ ಆಗಿದ್ದು,ಭರವಸೆ ಸಮಿತಿ‌ಸಭೆಯಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಭರವಸೆ‌ಸಮಿತಿಯಲ್ಲಿ ಸಿಕ್ಕಿರುವ ಭರವಸೆಯಂತೆ ಪೊಳಲಿ ಸೇತುವೆ ಕಾಮಗಾರಿ ಮೂರು ದಿನದ ಒಳಗಾಗಿ ಆರಂಭಿಸಲು ಪೊಳಲಿ ಶ್ರೀ‌ರಾಜರಾಜೇಶ್ವರಿಯೇ ಬುದ್ದಿ ನೀಡಬೇಕು‌.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter