ಬಂಟ್ವಾಳ: 5.27 ಕೋ.ರೂ. ವೆಚ್ಚದಲ್ಲಿ ಅತೀಪ್ರಾಮುಖ್ಯವಿರುವ ಮೂರು ರಸ್ತೆಗಳ ಅಭಿವೃದ್ಧಿಗೆ ಶಿಲಾನ್ಯಾಸ
ಬಂಟ್ವಾಳ:ಕೇಂದ್ರ ಸಿಆರ್ಎಫ್ ನಿಧಿಯಿಂದ ದ.ಕ.ಲೋಕಸಭಾ ಕ್ಷೇತ್ರಕ್ಕೆ 42 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ 6 ಕೋ.ರೂ.ಗಳನ್ನು ಬಂಟ್ವಾಳ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದ್ದು,ಇದರಲ್ಲಿ 5.27 ಕೋ.ರೂ.ಗಳಲ್ಲಿ ವೆಚ್ಚದಲ್ಲಿ ಅತೀಪ್ರಾಮುಖ್ಯವಿರುವ ಮೂರು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.

ಸಾಲೆತ್ತೂರು,ಕಲ್ಲಡ್ಕ ,ಪಚ್ಚಿನಡ್ಕದಲ್ಲಿ ರಸ್ತೆ ಅಭಿವೃದ್ದಿಗೆ ಶುಕ್ರವಾರ ಸಂಜೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಬಂಟ್ವಾಳ ಕ್ಷೇತ್ರದ ಪೊಳಲಿ-ಪಚ್ಚಿನಡ್ಕ 3.33 ಕಿ.ಮೀ.ರಸ್ತೆಗೆ 2 ಕೋ.ರೂ, ಕಲ್ಲಡ್ಕ-ವೀರಕಂಭ 2.25 ಕಿ.ಮೀ.ರಸ್ತೆಗೆ 1.35 ಕೋ.ರೂ. ಹಾಗೂ ಸಾಲೆತ್ತೂರು-ಕಟ್ಟತ್ತಿಲ 3.2 ಕಿ.ಮೀ.ರಸ್ತೆಗೆ 1.32 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಸಿಆರ್ಎಫ್ ಯೋಜನೆಯಲ್ಲಿ ಇನ್ನೂ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹೆಚ್ಚುವರಿ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ ಎಂದ ಸಂಸದ ಬ್ರಿಜೇಶ್ ಚೌಟ ಅವರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ವೇಗವನ್ನು ನೀಡಲಾಗಿದೆ ಎಂದರಲ್ಲದೆ ಕರ್ನಾಟಕ ಸರಕಾರವು ರಸ್ತೆಗಳ ಅಭಿವೃದ್ಧಿಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ರಸ್ತೆ ಕಾಮಗಾರಿಗಳಿಗೆ ಅನುದಾನ ಒದಗಿಸುವುದು ಶಾಸಕರು, ಸಂಸದರ ಜವಾಬ್ದಾರಿಯಾದರೂ ಕಾಮಗಾರಿಯ ಗುಣಮಟ್ಟವನ್ನು ಸ್ಥಳೀಯರುಗಮನಹರಿಸಬೇಕು,ಇಂಜಿನಿಯರ್ಗಳು ಕೂಡ ಎಚ್ಚರಿಕೆ ವಹಿಸಿ ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಿರ್ವಹಿಸುವ ಕುರಿತು ಪರಿಶೀಲಿಸಬೇಕು ಎಂದರು.
ವಿವಿಧೆಡೆಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ಉಪಾಧ್ಯಕ್ಷರಾದ ಪುಷ್ಪರಾಜ್ ಚೌಟ, ರವೀಶ್ ಶೆಟ್ಟಿ ಕರ್ಕಳ, ಸಹಕಾರಿ ಪ್ರಕೋಷ್ಠದ ಅಧ್ಯಕ್ಷ ಜಯರಾಮ ರೈ, ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು,ಬಿಜೆಪಿ ಮುಖಂಡರಾದ ಮೋನಪ್ಪ ದೇವಸ್ಯ, ವಿಕಾಸ್ ಪುತ್ತೂರು, ಮಾಜಿ ತಾ.ಪಂ.ಸದಸ್ಯ ಯಶವಂತ ಪೊಳಲಿ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಎಂಜಿನಿಯರ್ ಜೀತೇಂದ್ರ ಉಪಸ್ಥಿತರಿದ್ದರು.
ಮಾಧವ ಮಾವೆ ಸ್ವಾಗತಿಸಿದರು. ಶಶಿಧರ ರೈ ವಂದಿಸಿದರು. ರಾಜಾರಾಮ್ ಹೆಗ್ಡೆ, ಜಿನೇಂದ್ರ ಕೋಟ್ಯಾನ್, ಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು