ಬಂಟ್ವಾಳ: ಖಾಸಗಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಇ.ಎಸ್.ಐ.ಮಾಸಿಕ ವೇತನ ಶ್ರೇಣಿ ಹೆಚ್ಚಿಸುವಂತೆ ಸಂಸದರಿಗೆ ಮನವಿ

ಬಂಟ್ವಾಳ: ದೇಶದಲ್ಲಿನ ಖಾಸಗಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ದೊರಕುವಂತಗಲೂ ಈಗಾಗಲೇ ನೀಡುತ್ತಿರುವ 21 ಸಾವಿರ ಮಾಸಿಕ ವೇತನ ಶ್ರೇಣಿಯನ್ನು 30 ರಿಂದ 35 ಸಾ.ರೂ. ವರೆಗೆ ಹೆಚ್ಚಿಸುವಂತೆ ಕೇಂದ್ರ ಕಾರ್ಮಿಕ ಸಚಿವರಿಗೆ ಶಿಫಾರಸು ಮಾಡುವಂತೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಿದ್ದಕಟ್ಟೆ ಪ್ರಾ. ಕೃ.ಪ. ಸ. ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
ದೇಶದ ಖಾಸಗಿ ಕ್ಷೇತ್ರದ ಕಂಪೆನಿ ಗಳಲ್ಲಿ ಕೋಟ್ಯಂತರ ಉದ್ಯೋಗಿಗಳು ಮತ್ತು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಇ. ಎಸ್. ಐ. ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುತ್ತಿರುವುದರಿಂದ ಆಕಸ್ಮಿಕ ಮತ್ತು ಆಸಹಜ ಕಾಯಿಲೆಗಳಿಂದ ಕಷ್ಟದಲ್ಲಿರುವ ಕಾರ್ಮಿಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅವರು ಮನವಿಯಲ್ಲಿತಿಳಿಸಿದ್ದಾರೆ.
2015 ರವರೆಗೆ ಇ.ಎಸ್.ಐ. ಸೌಲಭ್ಯ ಪಡೆಯುವರೇ ವೇತನ ಮಿತಿ 15 ಸಾವಿರಕ್ಕೆ ನಿಗದಿಗೊಳಿಸಲಾಗಿತ್ತು. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ 2016 ರಲ್ಲಿ ಮಾಸಿಕ ವೇತನ ಶ್ರೇಣಿಯನ್ನು 21 ಸಾವಿರಕ್ಕೆ ಏರಿಕೆ ಮಾಡಿ ಕೋಟ್ಯಾಂತರ ಕಾರ್ಮಿಕರಿಗೆ ನೆರವು ಒದಗಿಸಲಾಗಿತ್ತು.
ಪ್ರಸ್ತುತ ಖಾಸಗಿ ಕಂಪೆನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಮತ್ತು ಕಾರ್ಮಿಕರಿಗೆ ಉದ್ಯೋಗದಲ್ಲಿ ಭಡ್ತಿ ನೀಡುತ್ತಿರುವುದರಿಂದ ಹಾಗೂ ಇನ್ನಿತರ ಕಾರಣಗಳಿಂದ ವೇತನ ಏರಿಕೆ ಮಾಡಿರುವುದರಿಂದ ಗರಿಷ್ಟ ಪ್ರಮಾಣದ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ಸೇರಿ ಮಾಸಿಕ 30-35 ಸಾವಿರ ವೇತನ ಲಭಿಸುತ್ತಿರುವುದ್ದು, 21 ಸಾವಿರ ಮೇಲ್ಪಟ್ಟ ವೇತನ ಶ್ರೇಣಿಯನ್ನು ಪಡೆಯುವ ಖಾಸಗಿ ಕ್ಷೇತ್ರದ ಉದ್ಯೋಗಿಗಳು ಮತ್ತು ಕಾರ್ಮಿಕರು ಇ.ಎಸ್.ಐ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರಭು ಮನವಿಯಲ್ಲಿ ವಿವರಿಸಿದ್ದಾರೆ.
ಬಡ ಕಾರ್ಮಿಕರಿಗೆ ಮತ್ತು ಖಾಸಗಿ ಉದ್ಯೋಗಿಗಳ ಕುಟುಂಬಗಳಿಗೆ ಇ.ಎಸ್.ಐ ಸೌಲಭ್ಯ ಪಡೆಯುವಂತಾಗಲು ಮಾಸಿಕ ವೇತನ ಶ್ರೇಣಿಯನ್ನು ರೂ. 35 ಸಾವಿರಕ್ಕೆ ಏರಿಕೆ ಮಾಡಲು ಕೇಂದ್ರ ಕಾರ್ಮಿಕ ಸಚಿವರಿಗೆ ಶಿಫಾರಸು ಮಾಡುವಂತೆ ಸಂಸದರುಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.