ಬಂಟ್ವಾಳ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಆಗ್ರಹ

ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿ ರಸ್ತೆಯ ಅಂಚೆಕಚೇರಿ ಬಳಿ ಸೆಟ್ ಬ್ಯಾಕ್ ಉಲ್ಲಂಘಿಸಿ ಮನೆಯ ಮುಂದೆ ರಸ್ತೆಯನ್ನು ಅತಿಕ್ರಮಿಸಿರುವುದು, ಅಸಮರ್ಪಕ ಚರಂಡಿಯಿಂದ ಕೊಳಚೆ ನೀರು ದುರ್ವಾಸನೆ ಬೀರುತ್ತಿರುವುದಲ್ಲದೆ ಸುಗಮ ಸಂಚಾರಕ್ಕೆ ಇಲ್ಲಿನ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸೋಮವಾರ ಬಂಟ್ವಾಳ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸ್ಥಳೀಯ ಪ್ರಮುಖರು ಆಗ್ರಹಿಸಿದರು.ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿಅಧ್ಯಕ್ಷ ಸುರೇಶ್ ಬಂಗೇರ ಅವರು ವಿಷಯ ಪ್ರಸ್ತಾವಿಸಿ, ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತಸಂಗ್ರಹಾಲಯ ಈ ಎರಡು ಅವಳಿ ಕೇಂದ್ರಗಳು ,ಅಂತರಾಷ್ಟ್ರೀಯ ಮಟ್ಟದಲ್ಲು ಗುರುತಿಸಿದೆ. ಪುರಸಭೆಗೂ ಒಂದು ಕಳಶಪ್ರಾಯ ಕೇಂದ್ರವಾಗಿದೆ.ಇಲ್ಲಿಗೆ ಜಿಲ್ಲೆ,ಹೊರಜಿಲ್ಲೆ ಮಾತ್ರವಲ್ಲ ದೇಶ,ವಿದೇಶದಿಂದಲು ಸಂಶೋಧಕರು, ಅಧ್ಯಯನಕಾರರು ಅಗಮಿಸುತ್ತಿದ್ದಾರೆ.ವಿವಿಧ ಕಾಲೇಜಿನ ವಿದ್ಯಾರ್ಥಿಗಳು,ಪ್ರಾಧ್ಯಪಕರು ಭೇಟಿ ನೀಡುತ್ತಾರೆ.ಸಂಚಯಗಿರಿ ಪುರಸಭಾ ವ್ಯಾಪ್ತಿಯಲ್ಲಿ ಮಾದರಿ ಬಡಾವಣೆಯಾಗಿದ್ದು, ಅಂಚೆಕಚೇರಿಯಿಂದ ಸಂಚಯಗಿರಿ ವರೆಗೆ ಸುಗಮ ಸಂಚಾರಕ್ಕಾಗಿ ರಸ್ತೆಯನ್ನು ಅತಿಕ್ರಮಿಸಿರುವುದನ್ನು ತೆರವುಗೊಳಿಸಬೇಕು,ಕೇಂದ್ರದ ಪಕ್ಕದಲ್ಲಿ ತೆರದ ಚರಂಡಿಯಲ್ಲಿ ಕೊಳಚೆ ನೀರು ಹರಿದು ರ್ದುನಾಥ ಬೀರುತ್ತಿದೆ.ಇದನ್ನು ಸರಿಪಡಿಸುವುದಲ್ಲದೆ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಆಗ್ರಹಿಸಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ, ಪ್ರೊ.ತುಕಾರಾಮ ಪೂಜಾರಿ ಇದಕ್ಕೆ ದ್ವನಿಗೂಡಿಸಿ,ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿ ನಲ್ಲಿಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.ಬಂಟ್ವಾಳ ಪುರಸಭೆ ಸಭಾಂಗಣದಲ್ಲಿ ನಡೆದ ಪುರಸಭೆ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪುರಸಭಾಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ ಮಾತನಾಡಿ, ಬಂಟ್ವಾಳ ಪುರಸಭೆಯ ಮುಂದಿನ ಬಜೆಟ್ ಗೆ ನಾಗರಿಕರ ಸಲಹೆ ಸೂಚನೆ ನೀಡುವಂತೆ ಕೋರಿದರು.
ಎ. ದಾಮೋದರ ಸಂಚಯಗಿರಿ ಅವರು ಮಾತನಾಡಿ, ಸಮಗ್ರ ಕುಡಿಯುವ ನೀರಿನ ಪೈಪ್ ತುಂಡಾಗಿ ನೀರು ಪೋಲಾಗುತ್ತಿದೆ. ಹಲವು ಬಾರಿ ಕೆಯುಡಬ್ಲ್ಯು ಎಸ್ ಇಂಜಿನಿಯರ್ ಮತ್ತು ಪುರಸಭಾ ಇಂಜಿನಿಯರ್ ಅವರಿಗೆ ದೂರು ನೀಡಿದರೂ ಪರಸ್ಪರ ಬೆರಳುತೋರಿಸುತ್ತಾರೆ ವಿನಹ ಇನ್ನು ದುರಸ್ತಿ ಮಾಡಲಲ್ಲಿ ಇದನ್ನು ಯಾರಲ್ಲಿ ಕೇಳಬೇಕು ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು. ಸಾಮಾಜಿಕ ಕಾರ್ಯಕರ್ತೆ ವಸಂತಿ ಗಂಗಾಧರ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 48 ಅಂಗನವಾಡಿ ಕೇಂದ್ರಗಳಿದ್ದು,ಇವುಗಳ ದುರಸ್ತಿಗೆ ಹಾಗೂ ಮಕ್ಕಳಿಗೆ ಆಟದ ಮೈದಾನ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವಂತೆ ಮನವಿ ಮಾಡಿದರು.
ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯಲ್ಲಿರುವ ಅಂಗನವಾಡಿ, ಹಾಸ್ಟೆಲ್ ಇದ್ದು, ಸುತ್ತಲು ಪೊದೆ ಅವರಿಸಿದೆ, ಅಂಗನವಾಡಿ ಕೇಂದ್ರಕ್ಕೆ ಹಾವು ಸಹಿತ ವಿಷಜಂರು ನುಗ್ಗಿದರೂ ಕೇಳುವವರಿಲ್ಲದ ಸ್ಥಿತಿ ಇದೆ ಎಂದು ಮುಸ್ತಾಫಾ ಹಾಗೂ ಪಿ.ಎಂ.ಅಶ್ರಫ್ ಗಮನಸೆಳೆದರು.ಪಾಣೆಮಂಗಳೂರು ಆಲಡ್ಕದಲ್ಲಿ ಒಳಚರಂಡಿ ನೀರು ಬ್ಲಾಕ್ ಆಗಿದೆ ಎಂದು ಮುಸ್ತಾಫಾ ದೂರಿದರು.
ಸಂತೆ ಸ್ಥಳಾಂತರಕ್ಕೆ ಆಗ್ರಹ:
ಬಿ.ಸಿ.ರೋಡ್ ಮೇಲ್ಸ್ ತುವೆಯ ಕೆಳಭಾಗದಲ್ಲಿ ಭಾನುವಾರದ ಸಂತೆ ಹೆದ್ದಾರಿಗೆ ತಾಗಿಕೊಂಡೆ ನಡೆಯುವುದರಿಂದ ವಾಹನ ಸವಾರರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಇದನ್ನು ಯಾರಿಗೂ ತೊಂದರೆಯಾಗದ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸುರೇಶ್ ಬಂಗೇರ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಈ ವಾರದಸಂತೆ ಪುರಸಭೆಯ ಅಧಿಕೃತ ಸಂತೆಯಲ್ಲ,ಇದೀಗ ಒಣಮೀನು ಮಾರಾಟಕೂಡ ಆರಂಭವಾಗಿದ್ದು, ಸಾರ್ವಜನಿಕರ ಆಕ್ಷೇಪವು ಬಂದಿದೆ.ಹಾಗಾಗಿ ಅಧ್ಯಕ್ಷ ಈ ಬಗ್ಗೆ ಶಾಸಕರು,ಪೊಲೀಸ್ ಅಧಿಕಾರಿ,ತಾ.ಪಂ.ಇಒಅವರೊಂದಿಗೆ ಚರ್ಚಿಸಲಾಗಿದೆ.ಸೂಕ್ತ ಸ್ಥಳವೊಂದನ್ನು ಗುರುತಿಸಿ ಸಂತೆಯನ್ನು ಸ್ಥಳಾಂತರಿಸುವ ಚಿಂತನೆ ಇದೆ ಎಂದು ಅಧ್ಯಕ್ಷ ವಾಸುಪೂಜಾರಿ ತಿಳಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಪೇಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು,ಬಿ.ಸಿ.ರೋಡು ಪೆಟ್ರೋಲ್ ಪಂಪ್ ನಿಂದ ಬಸ್ ತಂಗುದಾಣದವರೆಗೆ ಪುಟ್ ಪಾತ್ ನಲ್ಲೆ ವಾಹನ ಪಾಕ್೯ ಮಾಡುತ್ತಿರುವುದು ಮತ್ತು ಇಲ್ಲಿ ಚರಂಡಿಯನ್ನು ಸಮರ್ಪಕವಾಗಿ ನೀರು ಹರಿದುಹೋಗುವಂತೆ ಮಾಡುವುದು,ನಗರ ಪೊಲೀಸ್ ಠಾಣೆಯ ರಸ್ತೆ ದಾರಿದೀಪ ಅಳವಡಿಸುವುದು ಸಹಿತ ವಿವಿಧ ಬೇಡಿಕೆಗಳು ಸಭೆಯಲ್ಲಿ ಕೇಳಿ ಬಂತು.
ಮಲತಾಯಿಧೋರಣೆ:
ಇದೇ ವೇಳೆ ಬಂಟ್ವಾಳ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ಬಾಳಿಗಾ ಮಾತನಾಡಿ, ಬಂಟ್ವಾಳಕ್ಕೆ 400 ವರ್ಷಗಳ ಇತಿಹಾಸವಿದೆ. ಪುರಸಭಾ ಕಚೇರಿ ಬಂಟ್ವಾಳ ಪೇಟೆಯಲ್ಲಿದ್ದು, ಇಡೀ ಬಂಟ್ವಾಳ ಪೇಟೆಯಿಂದ ಪುರಸಭೆಗೆ ಆದಾಯ ಬರುತ್ತಿದ್ದರೂ, ಅಭಿವೃದ್ಧಿಯ ವಿಚಾರದಲ್ಲಿ ಮಲತಾಯಿ ಧೋರಣೆ ತಾಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾವು ತೆರಿಗೆ,ನೀರಿನ ಬಿಲ್ಲು ಏನಾದರೂ ಬಾಕಿ ಇಟ್ಟಿದ್ದೇವಾ ಎಂದು ಪ್ರಶ್ನಿಸಿದ ಅವರು, ಸಮರ್ಪಕವಾದ ಶೌಚಾಲಯದ ವ್ಯವಸ್ಥೆ ಇಲ್ಲ,ಇರುವ ಶೌಚಾಲಯ ಗಬ್ಬು ವಾಸನೆಯಿಂದ ಜನಸಾಮಾನ್ಯ ಬಳಸುವ ಸ್ಥಿತಿಯಲ್ಲಿಲ್ಲ,ಒಳಚರಂಡಿ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ,ಈ ಯೋಜನೆಯೇ ನೆನೆಗುದಿಗೆ ಬಿದ್ದಿದೆ.ದೇವರಕಟ್ಟೆಬಸ್ ತಂಗುದಾಣ ನಿರ್ಮಿಸಿ ದಶಕವೇ ಕಳೆಯಿತು.ಇಲ್ಲಿ ಇದುವರೆಗೂ ಒಂದೇ ಒಂದು ಬಸ್ ನಿಲುಗಡೆಯಾಗುತ್ತಿಲ್ಲ, ಪುರಸಭೆಯಿಂದ ಸಾಧ್ಯವಾಗದಿದ್ದರೆ ವರ್ತಕರ ಸಂಘಕ್ಕೆ ಲೀಸ್ ಗೆ ಬಿಟ್ಟುಕೊಡಿ,ಒಟ್ಟಾರೆ
ಬಂಟ್ವಾಳ ನಗರದ ಅಭಿವೃದ್ದಿಯೇ ಮರಿಚಿಕೆಯಾಗಿದೆ.
ಇದು ನಮ್ಮ ಮರ್ಯಾದೆ ಪ್ರಶ್ನೆಯಾಗಿದೆ.ಪುರಸಭೆಯಲ್ಲಿ ಹಣಕಾಸಿನ ಮುಗ್ಗಟ್ಟಿದ್ದರೆ ಲಿಖಿತವಾಗಿ ನಮಗೆ ತಿಳಿಸಿ, ನಾವು ಕೊಡ್ತೇವೆ ಎಂದರು.ಪುರಸಭೆಯ ಬಹುತೇಕ ರಸ್ತೆ ಕಾಂಕ್ರಿಟೀಕರಣ ಆಗಿದೆ.ಆದರೆ ನಗರದ ಮಧ್ಯಭಾಗದಲ್ಲಿರುವ ಶಾಲಾ
ರಸ್ತೆಗಳು ಕಾಂಕ್ರಿಟ್ ಇದುವರೆಗೂ ಆಗಿಲ್ಲ,ನಾವೇನು ಪಾಪ ಮಾಡಿದ್ದೆವೆ. ಸೆಟ್ ಬ್ಯಾಕ್ ಕಾನೂನಿನಿಂದಾಗಿ ಬಂಟ್ವಾಳ ಪೇಟೆ ಅವನತಿ ಹೊಂದುವ ಸಾಧ್ಯತೆ ಇದೆ.ಬಂಟ್ವಾಳ ಪೇಟೆಯ ಅಭಿವೃದ್ಧಿಯ ದೃಷ್ಠಿಯಿಂದ ಎಲ್ಲಾರೀತಿಯ ಸಹಕಾರ ನೀಡಲು ವರ್ತಕರ ಸಂಘ ಬದ್ದವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ವಾಸುಪೂಜಾರಿ ದೇವರಕಟ್ಟೆಬಸ್ ತಂಗುದಾಣದಲ್ಲಿ ಬಸ್ ನಿಲುಗಡೆಯ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಅದ್ಯತೆಯ ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು,ಉಳಿದಂತೆ ಅನುದಾನದ ಲಭ್ಯತೆಗನುಗುಣವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆಯಿತ್ತರು.ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಮೆನೇಜರ್ ರಜಾಕ್ , ಉಮಾವತಿ ಉಪಸ್ಥಿತರಿದ್ದರು.