ಊರಿನ ಶಾಲೆಯ ಏಳಿಗೆಗೆ ಶ್ರಮಿಸುವುದು ಶಾಲಾ ಪೋಷಕರ ಮತ್ತು ಆ ಊರಿನ ಜನತೆಯ ಕರ್ತವ್ಯ: ರಮಾನಾಥ ರೈ

ಬಂಟ್ವಾಳ: ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಸ್ತುವಾರಿ ಸಚಿವರಾದ ರಮಾನಾಥ ರೈ ಊರಿನ ಶಾಲೆಯ ಏಳಿಗೆಗೆ ಶ್ರಮಿಸುವುದು ಶಾಲಾ ಪೋಷಕರ ಮತ್ತು ಆ ಊರಿನ ಜನತೆಯ ಕರ್ತವ್ಯವಾಗಿದೆ. ಒಂದು ವಿದ್ಯಾ ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿದ್ದರೂ ಎಲ್ಲರನ್ನೂ ಸಮಾನವಾಗಿ ಕಾಣಬೇಕಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರು 2002-03 ನೇ ಸಾಲಿನಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹ ಯೋಜನೆಯನ್ನು ಜಾರಿಗೆ ತಂದಿದ್ದು,ಪ್ರಸ್ತುತ ಕಾಲಘಟ್ಟದಲ್ಲಿ ಅದು ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತೀ ಎಸ್ ರಾವ್ ವಹಿಸಿದ್ದರು.ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕನ್ನೋಟ್ಟು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ನಿವೃತ್ತ ಮುಖ್ಯಶಿಕ್ಷಕ ಆನಂದ ನಾಯ್ಕ ಏನ್ ದಂಪತಿಗಳನ್ನು ಹಾಗೂ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಾಲಾ ಹಿರಿಯ ವಿದ್ಯಾರ್ಥಿಗಳಾದ ದೀಪ್ತಿ, ಆಯಿಶತುಲ್ ಸಾಹಿಪ, ಕೆ ಅಸ್ಪಿಯ, ವಿನುತಾ ರವರನ್ನು ಅಭಿನಂದಿಸಲಾಯಿತು.
ಶಾಲೆಯಲ್ಲಿ 18 ವರ್ಷಗಳಿಂದ ಅಕ್ಷರ ದಾಸೋಹ ಅಡುಗೆ ಕಾರ್ಯನಿರ್ವಹಿಸುತ್ತಿರುವ ಸರೋಜಿನಿ ಅವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ಕಲಿಕೆ, ಆಟೋಟ, ಸ್ವಚ್ಛತೆ, ಪೂರ್ಣ ಹಾಜರಾತಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ರಾಜ್ಯ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ದಲ್ಲಿ ಭಾಗವಹಿಸಿದ ಕಾರ್ತಿಕ್ ಕುಮಾರ್ ರವರನ್ನು ಅಭಿನಂದಿಸಾಲಾಯಿತು.ಶಾಲೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪಂಚಾಯತ್ ಸದಸ್ಯರುಗಳಾದ ಹರಿಶ್ಚಂದ್ರ ಕಾಡಬೆಟ್ಟು, ಜಯ ದೇವಾಡಿಗ, ದೇವಿ ಪ್ರಸಾದ್ ಶೆಟ್ಟಿ, ಗೀತಾ, ಕೆದಿಲ ಕ್ಲಸ್ಟರ್ ಸಿ ಆರ್ ಪಿ ಸುಧಾಕರ್ ಭಟ್,ಕೆಮ್ಮಾನುಪಲ್ಕೆ ನಿವೃತ್ತ ಶಾಲಾ ಮುಖ್ಯ ಶಿಕ್ಷಕರುಗಳಾದ ಆನಂದ ನಾಯ್ಕ್, ಶಿವಪ್ಪ ಪೂಜಾರಿ, ಸುಂದರ್, ಹೇಮಾವತಿ,ಕಡೇಶಿವಾಲಯ ಶಾಲಾ ಮುಖ್ಯ ಶಿಕ್ಷಕ ಬಾಬು ಪೂಜಾರಿ, ನಿವೃತ್ತ ಸೈನಿಕ ಕೆ ಕೆ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಝಕ್ ಯಾನೆ ಸಲೀಂ, ಉಪಾಧ್ಯಕ್ಷ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಉದಯಕುಮಾರ್ ಸ್ವಾಗತಿಸಿ, ಸಹ ಶಿಕ್ಷಕಿ ವಿದ್ಯಾ ಸರಸ್ವತಿ ವರದಿ ವಾಚಿಸಿದರು. ಶಿಕ್ಷಕಿ ಸೀಮಾ ಎಚ್ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಜಿ ಪಿ ಟಿ ಶಿಕ್ಷಕ ಸಚಿನ್ ಎಮ್ ಎಸ್ ವಂದಿಸಿದರು. ಸಹ ಶಿಕ್ಷಕಿ ಸಂಧ್ಯಾ ಬಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.