ಜಾರಂದಗುಡ್ಡೆಯ ಪುಟ್ಟಕ್ಕ ನ ಮೊಗದಲ್ಲಿ ಮೂಡಿದ ಮಂದಹಾಸ: ವನಿತಾ ಶೆಟ್ಟಿ ಕುಟುಂಬಕ್ಕೆ ಸುಸಜ್ಜಿತ ಮನೆ
ಬಂಟ್ವಾಳ:ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯ ಪುಟ್ಟಕ್ಕನ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ.ರಣಮಳೆಗೆ ಮನೆಕಳಕೊಂಡು ಬದುಕೇ ಅತಂತ್ರವಾಗಿದ್ದ ವನಿತಾ ಶೆಟ್ಟಿ ಕುಟುಂಬಕ್ಕೆ ಸುಸಜ್ಜಿತ ಒದಗುವ ಭಾಗ್ಯ ದೊರೆತಿದೆ. ದಾನಿಗಳ ಸಹಕಾರದಲ್ಲಿ ಫರಂಗಿಪೇಟೆ ವಲಯ ಬಂಟರ ಸಂಘ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಅ. 24 ರಂದು ಮನೆನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ.

ಮುರುಕಲು ಮನೆಯಾದರೂ ಸರಿ ಸ್ವಂತ ಸೂರು ಇದ್ದರೆ ಮನೆ ಬಾಡಿಗೆಯ ಹಣವನ್ನಾದರೂ ಉಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬಹುದು ಎಂಬ ಯೋಚನೆಯಿಂದ ಖರೀದಿಸಿದ ಮನೆ ಎರಡೇ ತಿಂಗಳಲ್ಲಿ ನೆಲಕ್ಕಚ್ಚಿದ ಪರಿಣಾಮ ಜಾರಂದಗುಡ್ಡೆಯ ವನಿತಾ ಶೆಟ್ಟಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕು ಅತಂತ್ರವಾಗಿತ್ತು. ಇದೀಗ ವನಿತಾ ಶೆಟ್ಟಿ ಕುಟುಂಬದ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ.

ಅಂದು ಸುರಿದ ರಣಚಂಡಿ ಮಳೆಗೆ ಬಂಟ್ವಾಳದ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ವನಿತಾ ಶೆಟ್ಟಿ ಖರೀದಿಸಿದ್ದ ಮನೆ ಕುಸಿದು ದಯನೀಯ ಸ್ಥಿತಿ ಗೆ ಸ್ಪಂದಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಮಂದಿ ಸಹೃದಯ ದಾನಿಗಳು ನೆರವಿಗೆ ಧಾವಿಸಿದ್ದರು.
ಇದೀಗ ವನಿತಾ ಶೆಟ್ಟಿ ಅವರಿಗೆ ನೂತನ ಮನೆ ನಿರ್ಮಾಣದಕಾಲ ಕೂಡಿ ಬಂದಿದ್ದು, ಅ.24ರಂದು ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಫರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಮಾಣ್ ಇದರ ಸಂಪೂರ್ಣ ನೇತೃತ್ವ ವಹಿಸಲಿದ್ದಾರೆ.
ಸ್ಥಳೀಯಾಡಳಿತದಿಂದ ಸಹಕಾರ:
ಆಶ್ರಯ ಕಳೆದುಕೊಂಡ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ದಿಕ್ಕೆಟ್ಟಿದ್ದ ತಾಯಿಯ ಅರಣ್ಯ ರೋದನಕ್ಕೆ ಕಳ್ಳಿಗೆ ಗ್ರಾಮ ಪಂಚಾಯಿತ್ ನ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಹಾಗೂ ಪಿಡಿಒ ಅವರನ್ನೊಳಗೊಂಡ ತಂಡದ ಸಕಾಲಿಕ ಸ್ಪಂದಿಸಿದೆ.
ಈ ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಗ್ರಾ.ಪಂ. ಆಡಳಿತ ನೀಡಿದೆ.ವನಿತಾ ಶೆಟ್ಟಿಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ ಅಲ್ಪಪ್ರಮಾಣದ ಮೊತ್ತ ಈಗಾಗಲೇ ಸಂಗ್ರಹವಾಗಿದ್ದು, ಇನ್ನಷ್ಟು ಮೊತ್ತದ ಅವಶ್ಯಕತೆ ಇದೆ. ಕಲ್ಲು, ಜಲ್ಲಿ, ಹೊಯಿಗೆ, ಸಿಮೆಂಟ್, ದಾರಂದ, ಕಿಟಕಿಯ ಅಗತ್ಯವಿದೆ. ನೆರವು ನೀಡಬಯಸುವ ಸಹೃದಯ ದಾನಿಗಳು ಮೊ.ನಂ. 70267 75683 ಸಂಪರ್ಕಿಸಬಹುದಾಗಿದೆ.
—-ಸಹೃದಯ ದಾನಿಗಳ ನೆರವು
ತನ್ನ ಮೂವರು ಹೆಣ್ಣು ಮಕ್ಕಳ ವಿದ್ಯಾಭಾಸಕ್ಕಾಗಿ ಅಡುಗೆ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ‘ಜಾರಂದಗುಡ್ಡೆಯ ಪುಟ್ಟಕ್ಕ ವನಿತಾ ಶೆಟ್ಟಿ ಅವರ ದಯನೀಯ ಸ್ಥಿತಿಗೆ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಂಟರ ಸಂಘದ ಪ್ರಮುಖರು, ಶಿಕ್ಷಕರು, ಸ್ಥಳೀಯರು ಜಾತಿ, ಮತ, ಧರ್ಮ, ಪಕ್ಷವನ್ನು ಮರೆತು ಅನೇಕ ಮಂದಿ ಸಹೃದಯ ದಾನಿಗಳು ಮಾನವೀಯ ನೆಲೆಯಲ್ಲಿ ನೆರವು ನೀಡಿದ್ದಾರೆ.
ಸುಸಜ್ಜಿತ ಮನೆ ನಿರ್ಮಾಣ-
ವನಿತಾ ಶೆಟ್ಟಿ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸುವ ನಿಟ್ಟಿನಲ್ಲಿ ಬಂಟ ಸಮುದಾಯಕ್ಕೆ ಸಂಬಂಧಿಸಿದ ಎಲ್ಲ ಒಕ್ಕೂಟಗಳು, ಸಂಘ ಸಂಸ್ಥೆಗಳ ಸಹಕಾರ ಲಭಿಸಲಿದೆ. ಸುಸಜ್ಜಿತವಾದ ಮನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಲು ಪ್ರಯತ್ನಗಳನ್ನು ಮಾಡಲಾಗುವುದು.
ದೇವದಾಸ ಶೆಟ್ಟಿ ಕೊಡ್ಮಾಣ್, ಫರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ