ವಿಶ್ವಕರ್ಮರ ಜ್ಞಾನದ ಪರಿಧಿ ಅಪರಿಮಿತ: ಉಪತಹಶೀಲ್ದಾರ್ ನವೀನ್ ಬೆಂಜನಪದವು
ಬಂಟ್ವಾಳ : ವಿಶ್ವಕರ್ಮರ ಜ್ಞಾನದ ಪರಿಧಿ ಅಪರಿಮಿತ, ಅವರಿಂದ ಮೂಡಿಬರುವ ಕಲಾಕೃತಿಗಳೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಉಪತಹಶೀಲ್ದಾರ್ ನವೀನ್ ಬೆಂಜನಪದವು ಹೇಳಿದರು.ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಬಿ.ಸಿರೋಡು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸುಧಾಕರ ಆಚಾರ್ಯರು, ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚುಹೆಚ್ಚು ಒತ್ತು ನೀಡುತ್ತಿರುವುದು ಸಂತೋಷದ ವಿಚಾರ ಎಂದರು.

ಪ್ರಧಾನ ಭಾಷಣ ಮಾಡಿದ ಪತ್ರಕರ್ತ ಮೌನೇಶ ವಿಶ್ವಕರ್ಮರವರು, ಭಾರತದ ಕೀರ್ತಿ ಜಗದಗಲ ಹಬ್ಬಿದ್ದರೆ ಅದರಲ್ಲಿ ವಿಶ್ವಕರ್ಮ ಸಮುದಾಯದ ಕಲಾಶ್ರೀಮಂತಿಕೆಯೂ ಪ್ರಮುಖ ಕಾರಣ ಎಂದರು. ವಿಶ್ವಕರ್ಮರು ಶ್ರಮಜೀವಿಗಳಾಗಿದ್ದು, ಅವರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗದಂತೆ, ಸರ್ಕಾರ, ಸಂಘ ಸಂಸ್ಥೆಗಳು ಗಮನಹರಿಸಬೇಕಾಗಿದೆ ಎಂದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ರವರು ಮಾತನಾಡಿ, ವಿಶ್ವಕರ್ಮ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ ಅರ್ಥಪೂರ್ಣವಾಗಿ ನಡೆಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭ ತಾಲೂಕು ಆಡಳಿತದ ವತಿಯಿಂದ ಉದಯೋನ್ಮುಖ ಶಿಲ್ಪಿ ಪ್ರಶಾಂತ್ ಆಚಾರ್ಯ ರವರನ್ನು ಸನ್ಮಾನಿಸಲಾಯಿತು.
ಆನೆಗುಂದಿ ಮಹಾ ಸಂಸ್ಥಾನದ ಗುರು ಸೇವಾ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷ ಯುವರಾಜ ಆಚಾ̧ರ್ಯ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ,ಸುನಿಲ್ ಆಚಾರ್ಯ,ಜಯಪ್ರಕಾಶ ಆಚಾರ್ಯ, ಜಯಚಂದ್ರ ಆಚಾರ್ಯ, ಅಶೋಕ್ಆಚಾರ್ಯ, ಉಪತಹಶೀಲ್ದಾರ್ ನರೇಂದ್ರ ಮಿತ್ತೂರು , ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು. ಉಪತಹಶೀಲ್ದಾರ್ ದಿವಾಕರ್ ಮುಗುಳ್ಯ ಸ್ವಾಗತಿಸಿದರು, ತಾಲೂಕು ಕಛೇರಿಯ ಜನಾರ್ಧನ್ ವಂದಿಸಿದರು. ಶ್ರೀಕಲಾ ಕಾರಂತ್ ಕಾರ್ಯಕ್ರಮ ನಿರ್ವಹಿಸಿದರು.