ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ವತಿಯಿಂದ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ವಿನೂತನ ಕಾರ್ಯಕ್ರಮ
ಬಂಟ್ವಾಳ : ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ವತಿಯಿಂದ ಗ್ರಾಮದ ಪುಣ್ಕೇದಡಿಯಲ್ಲಿ ಹಡೀಲು ಬಿದ್ದಿರುವ ಗದ್ದೆಯಲ್ಲಿ ಭತ್ತ ಕೃಷಿ ನಾಟಿಯ ಪ್ರಯುಕ್ತ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ವಿನೂತನ ಕಾರ್ಯಕ್ರಮ ಭಾನುವಾರ ನಡೆಯಿತು.

ಗದ್ದೆಯ ಮಾಲಕ ಶೀನಪ್ಪ ಪೂಜಾರಿ ಕಲ್ಲಾಜೆ ಬ್ರಹ್ಮಶ್ರೀನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮದ ಸಂಘಟಕರಿಗೆ ಭತ್ತದ ಕೃಷಿಗೆ ನೇಜಿಯನ್ನು ಹಸ್ತಾಂತರಿಸಿದರಲ್ಲದೆ
ಬಳಿಕ ಗದ್ದೆಗೆ ಹಾಲು ಏರೆದು ಸ್ವತಃ ನೇಜಿ ನಾಟಿ ಮಾಡಿ ಸಂಘಟಕರಿಗೆ ಕೃಷಿ ಮಾಡಲು ಗದ್ದೆಯನ್ನು ಬಿಟ್ಟುಕೊಟ್ಟರು.

ಈ ಸಂದರ್ಭ ಮಾತನಾಡಿದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ)ನ ಟ್ರಸ್ಟಿ ಲೋಕನಾಥ ಪೂಜಾರಿ ತಿಮರಾಜೆ ವ್ಯವಸಾಯ ಚಟುವಟಿಕೆಗಳೇ ನಮ್ಮ ದೇಶದ ಬೇರುಗಳು, ಕೃಷಿಯನ್ನೇ ಹಲವಾರು ಕುಟುಂಬಗಳು ತಮ್ಮ ಜೀವನೋಪಾಯವನ್ನಾಗಿ ಅವಲಂಬಿಸಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆದರೆ ವೈಜ್ಞಾನಿಕತೆಯು ಬೆಳೆದಂತೆ ಕೃಷಿಯ ಸಾಂಪ್ರದಾಯಿಕ ಸೊಗಡು ನಾಶಗೊಳ್ಳುತ್ತಿವೆ ಇದರಿಂದಾಗಿ ಹಿರಿಯರ ಕಾಲದಿಂದ ನಡೆದು ಬಂದ ಸಾಂಪ್ರದಾಯಿಕ ಪದ್ಧತಿಗಳು ನಾಶವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಕೃಷಿಯ ಮಹತ್ವ ಹಾಗೂ ಕೃಷಿಯ ವಿಧಾನವನ್ನು ಮುಂದಿನ ಪೀಳಿಗೆಗೆ ನೆನಪಿಸುವ ಉದ್ದೇಶದಿಂದ ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು, ಇದರಿಂದ ಬಂದ ಆದಾಯವನ್ನು ಟ್ರಸ್ಟಿನ ಸಮಾಜಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದರು.
ಇದೇ ವೇಳೆಸಂಘಟಕರಿಂದ ಗದ್ದೆ ಮಾಲಕ ಶೀನಪ್ಪ ಪೂಜಾರಿಯವರನ್ನು ಅಭಿನಂದಿಸಲಾಯಿತು.
ಹಿರಿಯರಾದ ಶಾಂತಪ್ಪ ಪೂಜಾರಿ ಪಚ್ಚಾಡಿಬೈಲ್, ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.) ನ ಗೌರವಾಧ್ಯಕ್ಷ ಮೋಹನ್ ಕುಮಾರ್ ಕಲ್ಲಾಜೆ, ಟ್ರಸ್ಟಿಗಳಾದ ಕೂಸಪ್ಪ ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಮಾಣಿ ಘಟಕದ ಮಾಜಿ ಅಧ್ಯಕ್ಷರುಗಳಾದ ಹರೀಶ್ ಬಾಕಿಲ, ಜಯಂತ್ ಬರಿಮಾರ್, ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾವ್,ಮಾಜಿ ಅಧ್ಯಕ್ಷ ಸುರೇಶ್ ಬನಾರಿ, ಯುವಶಕ್ತಿ ಕಡೇಶಿವಾಲಯ ಅಧ್ಯಕ್ಷ ದೇವಿಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಕ್ಕಳು, ಪುರುಷರು ಹಾಗೂ ಮಹಿಳೆಯರಿಗೆ ಕೆಸರುಗದ್ದೆಯಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲಾಯಿತಲ್ಲದೆ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.ಕ್ರೀಡಾ ಕೂಟದ ಬಳಿಕ ಎಲ್ಲರೂ ಸೇರಿಕೊಂಡು ಸುಮಾರು 10 ಕಳಸೆ ಗದ್ದೆಯಲ್ಲಿ ಕೃಷಿ ನಾಟಿ ಮಾಡಲಾಯಿತು.
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನ ಅಧ್ಯಕ್ಷ ವಿದ್ಯಾಧರ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಯಶವಂತ್ ಪತ್ತುಕೊಡಂಗೆ ವಂದಿಸಿದರು.