ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘಕ್ಕೆ 19.20 ಲಕ್ಷ ರೂ.ನಿವ್ವಳ ಲಾಭ
ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2023-24 ನೇ ಸಾಲಿನಲ್ಲಿ 327 ಲಕ್ಷ ರೂ.ವ್ಯವಹಾರ ನಡೆಸಿ 19.20 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಟನ್ನು ಘೋಷಿಸಿದರು.

ಸಂಘದ ಪಾಲು ಬಂಡವಾಳ 11.33 ಲಕ್ಷ ರೂ.ವಿಗೂ ಮೀರಿದ್ದು,2,597 ಲಕ್ಷ ರೂ. ಠೇವಣಿಯನ್ನು ಹೊಂದಿದೆ.2,796 ಲಕ್ಷ ರೂ.ದುಡಿಯುವ ಬಂಡವಾಳವಿದ್ದು, ಯಾವುದೇ ಬ್ಯಾಂಕಿನ ಸಾಲವಿಲ್ಲದೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘದಲ್ಲಿ 2,375 ಲಕ್ಷ ಠೇವಣಿಯನ್ನು ಹೂಡಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷ ರವೀಂದ್ರ ಕಂಬಳಿ 390 ಲಕ್ಷ ಹೊರಬಾಕಿ ಸಾಲ ಕೊಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಂಘವು ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲು’ ಎ’ ವರ್ಗವನ್ನು ಪಡೆದಿದೆ.ಬಿ.ಮೂಡ ಗ್ರಾಮದ ಪೊನ್ನೋಡಿಯಲ್ಲಿ ಕೇಂದ್ರ ಕಚೇರಿ ಸ್ವಂತ ನಿವೇಶನದಲ್ಲಿ ಕಾರ್ಯಾಚರಿಸುತ್ತಿದೆ.ಇಲ್ಲಿ 6 ಗೋದಾಮುಗಳನ್ನು ಹೊಂದಿದ್ದು,1 ಗೋದಾಮು ಪಡಿತರ ವಿತರಣೆಗೆ ಉಪಯೋಗಿಸಲಾಗುತ್ತಿದ್ದು,4 ಗೋದಾಮುಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದರು.
ಸಂಘವು 2 ಶಾಖೆಗಳನ್ನು ಹೊಂದಿದ್ದು,ಸಂಘದ ಬಂಟ್ವಾಳ ಶಾಖೆಯಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ಉಪಕರಣ,ಕ್ರಮಿನಾಶಕ ಹಾಗು ಇನ್ನಿತರ ಸಾಮಾಗ್ರಿಗಳ ಮಾರಾಟದ ವ್ಯವಸ್ಥೆಯನ್ನು ಹೊಂದಿದೆಯಲ್ಲದೆ ಬ್ಯಾಂಕಿಂಗ್ ವ್ಯವಹಾರ,ನ್ಯಾಯಬೆಲೆ ಅಂಗಡಿ ಮೂಲಕ ಜನರಿಗೆ ಪಡಿತರ ವಿತರಣೆಯ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದರು.
ಬಿ.ಸಿ.ರೋಡು ಮತ್ತು ತುಂಬೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು,ಇದನ್ನು ಬಾಡಿಗೆಗೆ ನೀಡಲಾಗಿದೆ.ಫರಂಗಿಪೇಟೆ ಶಾಖೆಯಲ್ಲಿ ವಿವಿಧ ಸಾಲಸೌಲಭ್ಯ ಹಾಗೂ ಇ-ಸ್ಟ್ಯಾಂಪಿಂಗ್ ವ್ಯವಹಾರವನ್ನು ನಡೆಸಲಾಗುತ್ತಿದ್ದು,ಈ ಶಾಖೆಯಲ್ಲು ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣಾ ವ್ಯವಸ್ಥೆ ಹೊಂದಿದೆ.ಎಲ್ಲಾ ಶಾಖೆಗಳು ಗಣಕೀಕೃತವಾಗಿದ್ದು,ಸಂಘವು ಸದಸ್ಯರ ,ಸಿಬ್ಬಂದಿಗಳ ಸಹಕಾರದಿಂದ ಯಶಸ್ಸಿನತ್ತ ಮುನ್ನಡೆಯುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ,ನಿರ್ದೇಶಕರುಗಳಾದ ಉಮೇಶ್ ಪೂಜಾರಿ, ಪಿ.ವೆಂಕಟೇಶ್ ನಾವಡ,ರಾಜೇಶ್ ಶೆಟ್ಟಿ, ವೆಂಕಟ್ರಾಯ ಪ್ರಭು, ಶ್ರೀಮತಿ ರತ್ನಾ ,ಜ್ಞಾನೇಶ್ವರ ಪ್ರಭು ,ಪದ್ಮನಾಭ ಕಿದೆಬೆಟ್ಟು ,ರಾಯಿ ಸುಂದರ ಭಂಡಾರಿ ,ಮನೋರಾಜ್ ಎ.,ಪೂವಪ್ಪ ,ರಾಮ ನಾಯ್ಕ್,ರೋಹಿನಾಥ್ ಕೆ.ಅವರು ವೇದಿಕೆಯಲ್ಲಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಧರ್ಮಪಾಲ ಭಂಡಾರಿ ಗತವರ್ಷದ ವರದಿ ವಾಚಿಸಿದರಲ್ಲದೆ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಬಿ.ಟಿ. ನಾರಾಯಣ ಭಟ್ ನೇರಳಕಟ್ಟೆ ವಂದಿಸಿದರು.ಸಿಬ್ಬಂದಿಗಳು ಸಹಕರಿಸಿದರು.