ಶ್ರೀರಾಮ ತ್ಯಾಗದ ಪ್ರತಿರೂಪ: ಒಡಿಯೂರು ಶ್ರೀ
ಬಂಟ್ವಾಳ: ತ್ಯಾಗದ ಪ್ರತಿರೂಪ ಶ್ರೀರಾಮ, ಸೇವೆಯ ಪ್ರತಿರೂಪ ಹನುಮಂತ, ಭಾರತದ ಮೌಲ್ಯ ಆದ್ಯಾತ್ಮ. ಶ್ರೀ ರಾಮ, ಶ್ರೀ ಕೃಷ್ಣರೇ ನಮಗೆ ಆದರ್ಶ. ರಾಮಯಣ ಭಗವದ್ಗೀತೆ ಬದುಕಿನ ದಾರಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರು ದತ್ತನಗರದ ಶ್ರೀ ವೀರ ಹನುಮಾನ್ ಮಂದಿರದ 22 ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಉಪತಹಶೀಲ್ದಾರ್ ನವೀನ್ ಬೆಂಜನಪದವು ಮಾತನಾಡಿ, ಸಂಸ್ಕಾರ ಇದ್ದಾಗ ಮನುಷ್ಯನ ಜೀವನಕ್ಕೆ ಮೌಲ್ಯ ಬರುತ್ತದೆ ಎಂದು ತಿಳಿಸಿದರು. ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಟ್ಟಲ್ಲಿ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ, ತುಳುವರ ಸಂಸ್ಕೃತಿ ಶ್ರೇಷ್ಠವಾದ ಸಂಸ್ಕೃತಿ, ಇದು ಮೂಢನಂಬಿಕೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನ್ಯಾಯವಾದಿ ಶೈಲಜಾ ರಾಜೇಶ್, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರತಾಪ್ ಆಳ್ವ, ಜ್ಯೋತಿಷಿ ಅನಿಲ್ ಪಂಡಿತ್, ಅಶೋಕ್ ಶೆಟ್ಟಿ ಸುಜೀರುಗುತ್ತು, ಉತ್ಸವ ಸಮಿತಿದ ಅಧ್ಯಕ್ಷ ಪುರುಷೋತ್ತಮ ದತ್ತನಗರ, ಪ್ರ.ಕಾರ್ಯದರ್ಶ ಗಣೇಶ್ ಎಸ್.ಮಲ್ಲಿ, ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಸುಜೀರು ಬೀಡು ಸ್ವಾಗತಿಸಿದರು. ನಾಗೇಶ್ ಅಮಿನ್ ಸುಜೀರು ವಂದಿಸಿದರು, ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಭಜನಾ ಸಂಕೀರ್ತನೆ, ರಾತ್ರಿ ಯಕ್ಷಗಾನ ಬಯಲಾಟ ನಡೆಯಿತು.