ಬಂಟ್ವಾಳದಲ್ಲಿ ಡಿ. 30ರಂದು ಕರಾವಳಿ ಕಲೋತ್ಸವಕ್ಕೆ ಚಾಲನೆ
ಬಂಟ್ವಾಳ: ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ “ಕರಾವಳಿ ಕಲೋತ್ಸವ 2023-24” ಬೃಹತ್ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಡಿ.30 ರಿಂದ ಜ.28 ರವರೆಗೆ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ, ಚಿಣ್ಣರಲೋಕ ಸೇವಾಬಂಧು (ರಿ) ಬಂಟ್ವಾಳ ಆಶ್ರಯದಲ್ಲಿ 30 ದಿನಗಳ ಕಾಲ ನಡೆಯುವ ಕಲೋತ್ಸವಕ್ಕೆ ಡಿ.30 ರಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡುವರು.
ಎಂದು ಸಂಸ್ಥೆಯ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಹಾಗೂ ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇದಕ್ಕು ಮುನ್ನ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಅದ್ದೂರಿಯ ʼಜಾನಪದ ದಿಬ್ಬಣ ಮೆರವಣಿಗೆʼ ಕಲೋತ್ಸವ ನಡೆಯುವ ಮೈದಾನದವರೆಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಘಾಟನಾ ದಿನ ನಡೆಯುವ ಕಾರ್ಯಕ್ರಮದಲ್ಲಿ ಕರಾವಳಿ ಸೌರಭ ರಾಜ್ಯ ಪ್ರಶಸ್ತಿಯನ್ನು ಸಮಾಜ ಸೇವಕ ಮತ್ತು ಅಂತಾರಾಷ್ಟ್ರೀಯ ಕೈಗಾರಿಕೋದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಉದಯ ಚೌಟ ಸಾಧನ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಪಟು ಸುಕೇಶ್ ಹೆಗ್ಡೆ ಹಾಗೂ ಸಂಗೀತ ಕ್ಷೇತ್ರದ ಆಶ್ಚಿತ್ ಎ.ಜೆ. ಮಂಗಳೂರು ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಕಲೋತ್ಸವದಲ್ಲಿ ಆಶೀರ್ವಚನ ನೀಡಲಿದ್ದು, ಇನ್ವೆಂಟ್ ಜೀಸಸ್ ಚರ್ಚ್ ಧರ್ಮಗುರು ಅ.ವಂ.ವಲೇರಿಯನ್ ಡಿಸೋಜ, ಮಿತ್ತ ಬೈಲ್ ಆಲ್ ಜಝರಿ ಇರ್ಷಾದ್ ಹುಸೈನ್ ದಾರಿಮಿ, ಎಸ್.ವೈ.ಎಸ್. ದ.ಕ. ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಜ್ ದಾರಿಮಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ವಿವಿಧ ವೇದಿಕೆ, ಮಳಿಗೆಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು 2023-24 ಚಿಣ್ಣರ ಅಧ್ಯಕ್ಷೆ ಶ್ರೀನಿಧಿ ಬಿ.ಸಿ.ರೋಡು ವಹಿಸಲಿದ್ದಾರೆ.
ಕಲಾವಿದ ದಿವಂಗತ ಮಂಜುವಿಟ್ಲ ಅವರ ವೇದಿಕೆಯಲ್ಲಿ ಜ.14 ರವರೆಗೆ ಪ್ರತಿದಿನ ಸಂಜೆ ತೆಲಿಕೆದ ತಮ್ಮನ, ಕರಾವಳಿ ಸರಿಗಮಪ ಸೀಸನ್- ೫, ವಿಚಾರ ಗೋಷ್ಠಿ, ನೃತ್ಯ ವೈಭವ, ಚೆಂಡೆ ಝಲಕ್, ಕೊಂಕಣಿ ನಾಟಕ, ರಸಮಂಜರಿ, ನಾಟಕ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಳೈಸಲಿದ್ದು ಇದಕ್ಕೆ ಉಚಿತ ಪ್ರವೇಶವಿರಲಿದೆ.
ಮತ್ತೊಂದೆಡೆ ಅಮ್ಯೂಸ್ ಮೆಂಟ್ ಪಾಕ್೯ ಮತ್ತು ವಸ್ತು ಪ್ರದರ್ಶನದ ವ್ಯವಸ್ಥೆ ಇರಲಿದ್ದು, ಜ.28 ರವರೆಗೆ ಇದು ಮುಂದುವರಿಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.