ಬಂಟ್ವಾಳ: ಮಂಗಳೂರು ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕಿನ ಬಿ.ಸಿ.ರೋಡು ಶಾಖೆಯು ಭಾನುವಾರ ಬಿ.ಸಿ.ರೋಡಿನಲ್ಲಿರುವ ಜಾಕು ಹೌಸ್ ಕಟ್ಟಡದಿಂದ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ ಬ್ಯಾಂಕಿನ ಕಟ್ಟಡದ ನೆಲ ಅಂತಸ್ತಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಾಮಾಜಿಕವಾಗಿ ಹಿಂದುಳಿದ ಸಮಾಜದ ಅಭ್ಯುಧಯಕ್ಕೆ ಸಹಕಾರಿ ಬ್ಯಾಂಕ್ಗಳು ಆರ್ಥಿಕ ಚೈತನ್ಯ ನೀಡುವ ಕಾರ್ಯ ಮಾಡಿದ್ದು, ನಾರಾಯಣ ಗುರುಗಳ ಅನುಯಾಯಿಗಳು ಸೇರಿ ಈ ಬ್ಯಾಂಕನ್ನು ಸ್ಥಾಪಿಸಿ ಅವರ ತತ್ವ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಲ್ಲಿನ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯವರು ವಿವಿಧ ಸಾಮಾಜಿಕ ಕ್ಷೇತ್ರದಲ್ಲಿ ದುಡಿದ ಅನುಭವ ಹೊಂದಿದ್ದು, ಹೀಗಾಗಿ ಬ್ಯಾಂಕ್ ಬಲಿಷ್ಠವಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ. ತಾನು ಕೂಡ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷನಾಗಿ ಬಳಿಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದೆ. ಶತಮಾನದ ಹೊಸ್ತಿಲಲ್ಲಿರುವ ಸಂಸ್ಥೆಯು ಬಿ.ಸಿ.ರೋಡಿನಲ್ಲಿ ವ್ಯವಸ್ಥಿತ ಜಾಗಕ್ಕೆ ಸ್ಥಳಾಂತರ ಗೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಗ್ರಾಹಕರಿಗೆ ಅನ್ಯಾಯವಾಗದ ರೀತಿಯಲ್ಲಿ ಸಾಲ ಮರು ಪಾವತಿಯ ಕಾರ್ಯವನ್ನು ನಿರ್ವಹಿಸುತ್ತಾ ಬಂದಿರುವ ನಮ್ಮ ಬ್ಯಾಂಕ್ ಪ್ರಸ್ತುತ ಕೋಟಿ ರೂ.ಗಳ ಸಾಲ ನೀಡುವ ಅವಕಾಶವನ್ನು ಪಡೆದಿದೆ. ಬ್ಯಾಂಕಿಗೆ ೫ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆಗೆಯುವುದಕ್ಕೆ ಅವಕಾಶ ಸಿಕ್ಕಿದ್ದು, ಶೀಘ್ರ ನಮ್ಮ ಜಿಲ್ಲೆಯಲ್ಲಿ ಎರಡು ಶಾಖೆಗಳನ್ನು ತೆರೆಯುವ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಈ ಶಾಖೆಯನ್ನು ವ್ಯವಸ್ಥಿತ ಜಾಗಕ್ಕೆ ಸ್ಥಳಾಂತರಿಸುವುದಕ್ಕೆ ಬಂಟ್ವಾಳ ಶಾಸಕರು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ನಗದು ಕೌಂಟರನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ, ಭದ್ರತಾ ಕೊಠಡಿಯನ್ನು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಹಾಗೂ ಗಣಕ ಯಂತ್ರ ವ್ಯವಸ್ಥೆಯನ್ನು ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶುಭ ಬೀಡೀಸ್ನ ಮಾಲಕ ಭುನವೇಶ್ ಪಚ್ಚಿನಡ್ಕ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಬಿ.ಸಿ.ರೋಡಿನ ಉದ್ಯಮಿ ಅಬ್ದುಲ್ ಮಜೀದ್ ಭಾಗವಹಿಸಿದ್ದರು.
ಬ್ಯಾಂಕಿನ ನಿರ್ದೇಶಕ ಕೆ.ಪದ್ಮನಾಭ ಕೋಟ್ಯಾನ್, ವಿಜಯಕುಮಾರ್ ಸೊರಕೆ, ಹರೀಶ್ ಪೂಜಾರಿ, ಜಗದೀಶ್ ಎನ್, ಶೇಖರ್ ಬಂಗೇರ, ಅಶೋಕ್ ಸುವರ್ಣ, ಪಿ.ವಿಶ್ವನಾಥ್ ನಾಯ್ಕ್, ಕುಪ್ಪ ಪೂಜಾರಿ, ಯೋಗೀಶ್ ಕೋಟ್ಯಾನ್, ನಾಗರಾಜ, ಚಂದ್ರಾವತಿ, ಎಂ.ಗಾಯತ್ರಿ, ಗಾಯತ್ರಿ ಗಣೇಶ್, ಚಂದ್ರಶೇಖರ್ ಕುಮಾರ್, ಬಿ.ರಮೇಶ್, ಯಶೋಧರ ಪಿ.ಕರ್ಕೇರ, ಯಾದವ್ ಕರ್ಮಾರ್, ಬಿ.ಸಿ.ರೋಡಿನ ಪ್ರಭಾರ ಶಾಖಾಧಿಕಾರಿ ಆನಂದ್ ಪಿ., ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.
ಬಿ.ಸಿ.ರೋಡ್ ಶಾಖೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕಿ ವಿಜಯ ಎಂ.ಕೋಟ್ಯಾನ್ ಸ್ವಾಗತಿಸಿದರು. ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ವಂದಿಸಿದರು. ಸಿಬ್ಬಂದಿ ಯತೀಶ್ ಕಾರ್ಯಕ್ರಮ ನಿರ್ವಹಿಸಿದರು.
