ಹಿಂದುತ್ವದ ಮೇಲಾಗುವ ಆಕ್ರಮಣವನ್ನು ಒಗ್ಗಟ್ಟಾಗಿ ವಿರೋಧಿಸಿ ತನ್ನತನವನ್ನು ಉಳಿಸೋಣ: ದಿನೇಶ್ ಶೆಟ್ಟಿ “ಕಾಂತಶ್ರೀ “ಪ್ರಶಸ್ತಿ ಪ್ರಧಾನ
ಬಂಟ್ವಾಳ: ಪವಿತ್ರ ಭಾರತದ ಭೂಮಿಯಲ್ಲಿ ದುಡಿದು ತಿನ್ನುವ ಕೈಗಳಾಗೋಣ, ನಮ್ಮೊಳಗಿನ ಬಿಕ್ಕಟ್ಟುಗಳನ್ನು ಬಿಟ್ಟು, ಜಾತಿವಾದವನ್ನು ಕುಟುಂಬಕ್ಕೆ ಸೀಮಿತವಾಗಿರಿಸಿ ಭವ್ಯ ಭಾರತದಲ್ಲಿ ಹಿಂದುಗಳಾಗಿ ನಮ್ಮ ಹಿಂದುತ್ವದ ಧಾರ್ಮಿಕತೆಯ ನಂಬಿಕೆ ಮೇಲೆ ನಡೆಯುವ ಅಕ್ರಮಣವನ್ನು ಒಗ್ಗಟ್ಟಾಗಿ ವಿರೋಧಿಸಿ ತನ್ನತನವನ್ನು ಉಳಿಸಿಕೊಳ್ಳೋಣ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಇದರ ವತಿಯಿಂದ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯುತ್ತಿರುವ 46ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನಿತ್ತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಸಿ ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವಹಿಸಿದ್ದರು.
ಕಾಂತಶ್ರೀ “ಪ್ರಶಸ್ತಿ ಪ್ರಧಾನ:
ಈ ಸಂದರ್ಭದಲ್ಲಿ ದಿವಂಗತ ಕೆ ಶಾಂತರಾಮ್ ಆಚಾರ್ ಕಲ್ಲಡ್ಕ ಸ್ಮರಣಾರ್ಥ “ಕಾಂತಶ್ರೀ “ಪ್ರಶಸ್ತಿಯನ್ನು ಪ್ರಸಿದ್ದ ದೈವ ನರ್ತಕ ರುಕ್ಮಯ ನಲಿಕೆ ಕೊಳಕೀರು ಅವರಿಗೆ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಶಾಂತಾರಂ ಕಲ್ಲಡ್ಕ ಒರ್ವ ಕಲ್ಲಡ್ಕದ ಪ್ರೇರಣ ಶಕ್ತಿಯಾಗಿದ್ದಾರೆ ಅವರಿಂದಾಗಿ ಕಲ್ಲಡ್ಕದಲ್ಲಿ ಅದೆಷ್ಟೋ ಕಲಾವಿದರು ಸೃಷ್ಟಿಯಾಗಿದ್ದಾರೆ. ಇಂದು ಕಲ್ಲಡ್ಕವು ವಿವಿಧ ಕಲಾವಿದರು ತುಂಬಿದ ನಾಡಾಗಿದೆ. ಅವರ ಹೆಸರಿನ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಉತ್ಸವ ಸಮಿತಿಗೆ ಆಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸುಮಾರು 32 ಬಾರಿ ರಕ್ತದಾನ ಮಾಡಿದ ಕುಶಲ ಚೆಂಡೆ ಯವರನ್ನು ಗ್ರಾಮ ಗೌರವ ನೀಡಿ ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಎಸ್. ಎಸ್. ಎಲ್ .ಸಿ ಹಾಗೂ ಪಿ .ಯು .ಸಿ ಯಲ್ಲಿ 90 ಶೇ.ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ ಕೃಷ್ಣಕೋಡಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಕೆ ಅಣ್ಣು ಪೂಜಾರಿ, ಬ್ಯಾಂಕ್ ಆಫ್ ಬರೋಡ ಹುಬ್ಬಳ್ಳಿ ಇದರ ಮುಖ್ಯ ಪ್ರಬಂಧಕ ಸದಾಶಿವ ಆಚಾರ್ಯ, ಉದ್ಯಮಿ ಶೈಲೇಶ್ ಶೆಟ್ಟಿ ಕುಕ್ಕ ಮಜಲು, ಶ್ರೀ ಶಾರದಾ ಉತ್ಸವ ಸಮಿತಿಯ ಅಧ್ಯಕ್ಷ ಯೋಗೀಶ್ ಗೌರೀಶ್, ಕಾರ್ಯದರ್ಶಿ ಪ್ರಮಿತ್ ಕುಮಾರ್ ಉಪಸ್ಥಿತರಿದ್ದರು.
ವಿಜಯ ಪ್ರಕಾಶ್ ಪ್ರಾರ್ಥಿಸಿ, ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್ ಪಂಚವಟಿ ಪ್ರಾಸ್ತಾವಿಸಿ, ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.