ಹಿರಿಯ ಶಿಕ್ಷಕ ಜಯಾನಂದ ಪೆರಾಜೆಗೆ ಅಮೃತ ಸಮ್ಮಾನ ಗೌರವ ಪ್ರಶಸ್ತಿ
ಬಂಟ್ವಾಳ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಇದರ ವತಿಯಿಂದ ಉಡುಪಿಯಲ್ಲಿ ಶಿಕ್ಷಕರ ದಿನಾಚರಣೆಯಂದು ಜರಗಿದ ಶಿಕ್ಷಕ ಸಾಹಿತಿಗಳ ೬ನೆಯ ರಾಜ್ಯ ಸಮ್ಮೇಳನದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ೩೪ ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಾನಂದ ಪೆರಾಜೆಯವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸಮ್ಮಾನಿಸಲಾಯಿತು.

ಗ್ರಾಮೀಣ ಹಿಂದುಳಿದ ಪ್ರದೇಶದ ಬಡ,ದೀನ-ದಲಿತ ಮಕ್ಕಳಿಗೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡಿರುವ ಅಮೂಲ್ಯ ಸೇವೆಗೆ ರಾಜ್ಯ ಮಟ್ಟದ ಅಮೃತ ಸಮ್ಮಾನ ಗೌರವ ಪ್ರಶಸ್ತಿ ನೀಡಲಾಗಿದೆ.
ಉಡುಪಿ ಅಂಬಲ್ಪಾಡಿ ಶ್ರೀ ಭವಾನಿ ಸಭಾಂಗಣದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ,ಸಾಹಿತಿ ನೆಂಪು ನರಸಿಂಹ ಭಟ್ಟರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಜರಗಿತು.ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ಅಂಬಲ್ಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ,ಉದ್ಯಮಿ ವಿಶ್ವನಾಥ ಶೆಣೈ,ಕ.ಚು.ಸಾ.ಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹುಬ್ಬಳ್ಳಿ,ಕಾರ್ಯದರ್ಶಿ ಶಾಂತ ಪುತ್ತೂರು,ಡಾ. ವಾಣಿಶ್ರೀ,ಗುರುರಾಜ ಕಾಸರಗೋಡು,ಸಾವಿತ್ರಿ ಮನೋಹರ್ ಕಾರ್ಕಳ,ಬಹು ಭಾಷಾ ಕವಿ ಅಂಶುಮಾಲಿ,ಉಡುಪಿ ಜಿಲ್ಲಾಧ್ಯಕ್ಷ ಜಿ.ಯು. ನಾಯಕ,ಉಪಾಧ್ಯಕ್ಷ ರಾಜು ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.