“ಶ್ರೀ ಏರ್ಯ- ಒಂದು ನೆನಪು ಹಾಗೂ ಕಾವ್ಯವಾಚನ -ವ್ಯಾಖ್ಯಾನ” ಕಾರ್ಯಕ್ರಮ
ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಹಾಗೂ ಅಭಿರುಚಿ ಜೋಡುಮಾರ್ಗ ಇವರ ಸಹಯೋಗದಲ್ಲಿ “ಶ್ರೀ ಏರ್ಯ- ಒಂದು ನೆನಪು ಹಾಗೂ ಕಾವ್ಯವಾಚನ -ವ್ಯಾಖ್ಯಾನ” ಕಾರ್ಯಕ್ರಮ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆಯಿತು.

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ ಪೂಂಜಾ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಸಂಶೋಧನ ಕೇಂದ್ರದ ಅಧ್ಯಕ್ಷ ಪ್ರೋ. ಡಾ.ತುಕಾರಾಮ್ ಪೂಜಾರಿ ಅವರು ಏರ್ಯ ಅವರ ಬಗ್ಗೆ ಸಂಸ್ಮರಣಾ ಭಾಷಣಗೈದು ಏರ್ಯರು ಸಾಹಿತ್ಯ, ಸಹಕಾರ,ಶಿಕ್ಷಣ ಹೀಗೆ ಹಲವು ರಂಗಗಳಲ್ಲಿ ಕ್ರಿಯಾಶೀಲರಾಗಿದ್ದ ಹಿರಿಯರು.ಆಯಾ ಕ್ಷೇತ್ರಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕಿರಿಯರು,ಯುವಕರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಅವರ ಗುಣ ಅನನ್ಯವಾದುದು ಎಂದರು.
ಬಳಿಕ ಖ್ಯಾತ ಗಮಕಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ವಾಮದಪದವು ಸರಕಾರಿ ಪ್ರ.ದ. ಕಾಲೇಜಿನ ಉಪನ್ಯಾಸಕಿ ರೇಶ್ಮಾ ಭಟ್ ಅವರಿಂದ ಪಂಪ ಭಾರತದ ದ್ರೋಣ-ದ್ರುಪದ ಭಾಗದ ಕಾವ್ಯವಾಚನ – ವ್ಯಾಖ್ಯಾನ ನಡೆಯಿತು. ಬಿ.ಮೂಡ ಸರ್ಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡಿದರು.
ಕ.ಸಾ.ಪ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಅಭಿರುಚಿ ಅಧ್ಯಕ್ಷ ಎಚ್.ಸುಂದರ ರಾವ್ ಉಪಸ್ಥಿತರಿದ್ದರು.
ಕ.ಸಾ.ಪ.ತಾಲೂಕು ಘಟಕದ ಗೌ.ಕಾರ್ಯದರ್ಶಿ ವಿ.ಸು.ಭಟ್ ಸ್ವಾಗತಿಸಿದರು.ಅಭಿರುಚಿ ಜೋಡುಮಾರ್ಗ ಕಾರ್ಯದರ್ಶಿ ಮಹಾಬಲೇಶ್ವರ ಹೆಬ್ಬಾರ್ ವಂದಿಸಿದರು.