ಉಡುಪಿ: ನಮ್ಮ ಭೂಮಿ, ನಮ್ಮ ಸಂಸೃತಿಯನ್ನು ಬಿಟ್ಟು ಬೇರೆ ಬೇರೆ ಕಾರಣಗಳಿಂದಾಗಿ ದೂರದ ದೇಶಗಳಿಗೆ ಹೋಗಿ ದುಡಿಯುವುದರಿಂದ ನಾವು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಅದರ ಬದಲಾಗಿ ಈ ನೆಲದ ಹಿರಿಮೆ ಗರಿಮೆಯನ್ನು ಅರ್ಥಮಾಡಿಕೊಂಡು ನಮ್ಮ ವಿದ್ಯೆ, ಬುದ್ಧಿ, ಚತುರತೆಯನ್ನು ಈ ದೇಶಕ್ಕಾಗಿಯೇ ಮೀಸಲಾಗಿಡೋಣ, ಆ ಮೂಲಕ ಭಾರತೀಯತೆಯನ್ನು ಸಶಕ್ತಗೊಳಿಸೋಣ ಎಂದು ಅದಮಾರು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭದಲ್ಲಿ ಉಪಸಿಸ್ಥಿತರಿದ್ದು, ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿಯಾದ ಹಾಗೂ ಪ್ರಸ್ತುತ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಅವರನ್ನು ಪೂಜ್ಯ ಶ್ರೀಪಾದರು ಸನ್ಮಾನಿಸಿ ಅಭಿನಂದಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಮ್ಮ ಬದುಕಿನಲ್ಲಿ ಪೂರ್ಣಪ್ರಜ್ಞ ಸಂಸ್ಥೆಯ ಪಾತ್ರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾ ʻʻನಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರಿಗೆ ಮಾದರಿಯಾಗುವಂತೆ ರೂಪಿಸಿಕೊಳ್ಳುವ ಮೂಲಕ, ನಾವು ನಮ್ಮ ಸುತ್ತಮುತ್ತಲಿನ ಪರಿಸರ, ರಾಜ್ಯ , ರಾಷ್ಟ್ರದ ಉದ್ಧಾರಕ್ಕೆ ಕಾರಣರಾಗಬೇಕಿದೆ.ʼʼ ಎನ್ನುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ಸಿ.ಎ. ಟಿ. ಪ್ರಶಾಂತ್ ಹೊಳ್ಳ ಅವರು ವಹಿಸಿಕೊಂಡಿದ್ದರು. ಇನ್ನೋರ್ವ ಅಭ್ಯಾಗತರಾದ ಶ್ರೀ ರಾಜಗೋಪಾಲ್.ಬಿ, ಉಪ ಮಹಾಪ್ರಬಂಧಕರು ಕರ್ನಾಟಕ ಬ್ಯಾಂಕ್, ಉಡುಪಿ ಜಿಲ್ಲೆ, ಇವರು ವಿದ್ಯಾರ್ಥಿ ಜೀವನದ ಮಹತ್ವವನ್ನು ತಿಳಿಸುತ್ತಾ ಶುಭ ಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿಗಳಾದ, ಡಾ. ಜಿ.ಎಸ್.ಚಂದ್ರಶೇಖರ್, ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ.ಜೆ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ.. ಚಂದ್ರಕಾಂತ್ ಭಟ್, ಶ್ರೀಮತಿ ಲವಿಟಾ ಡಿಸೋಜಾ, ಉಪ ಪ್ರಾಂಶುಪಾಲರಾದ ಶ್ರೀ ವಿನಾಯಕ್ ಪೈ, ವಿದ್ಯಾರ್ಥಿ ಪ್ರತಿನಿಧಿಗಳಾದ ರಮೇಶ್ ಕಾಮತ್, ಕುಮಾರೇಶ್, ಕು. ಸಿಂಧೂ, ಕು. ನಮ್ರತಾ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸಿ.ಎ. ಟಿ. ಪ್ರಶಾಂತ್ ಹೊಳ್ಳ ಅವರು ಸ್ವಾಗತಿಸಿ, ಕು.ಸಿಂಧೂ ವಂದಿಸಿದರು.ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
