ತುಳು ಚಿತ್ರರಂಗಕ್ಕೆ ಹೊಸ ಆಯಾಮ ನೀಡಲಿರುವ ರಾಮ್ ಶೆಟ್ಟಿ
ಮಂಗಳೂರು: ಸಾಲು-ಸಾಲು ತುಳು ಚಿತ್ರಗಳು ಸೆಟ್ಟೇರುತ್ತಿವೆ. ಹೊಸ ಹೊಸ ಕಲಾವಿದರು, ತಂತ್ರಜ್ಞರು ತುಳು ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. `ಚಾಲಿಪೋಲಿಲು’ನಂತಹ ಪಕ್ಕಾ ಮಾಸ್ ಚಿತ್ರವೊಂದು ನಿರೀಕ್ಷೆಗೂ ಮೀರಿ ಓಡ್ತಾ ಇದೆ. ಈ ನಡುವೆ ನಮ್ಮವರೇ ಆದ ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ `ಸ್ಟಂಟ್ ಮಾಸ್ಟರ್’ ಆಗಿ ಸುಮಾರು 700ಕ್ಕೂ ಅಧಿಕ ಸಿನಿಮಾದಲ್ಲಿ ದುಡಿದಿರುವ ರಾಮ್ ಶೆಟ್ಟಿಯವರು ಚಿತ್ರ ಮಾಡ್ತಾರೆ ಅಂತಂದ್ರೆ ಸಮ್ ಥಿಂಗ್ ಡಿಫರೆಂಟ್ ಇದ್ದೇ ಇರುತ್ತೆ ಅನ್ನೋದು ತುಳುವರ ಮಾತು. ಇದಕ್ಕೆ ಕಾರಣವೂ ಇಲ್ಲದಿಲ್ಲ, ಎರಡು ವರ್ಷಗಳ ಹಿಂದೆ ಅವರು ಸ್ವತ: ಕಥೆ ಬರೆದು ನಿದರ್ೇಶನ ಮಾಡಿದ್ದ `ಬಂಗಾರ್ದ ಕುರಲ್’ ಅನ್ನೋ ಚಿತ್ರ ತುಳುವರಿಗೆ ಹೆಚ್ಚು ಆಪ್ತವಾಗಿತ್ತು. ಮತ್ತದೇ ನಿರೀಕ್ಷೆಯನ್ನಿಟ್ಟುಕೊಂಡು ಸಿನಿಮಾ ಮಾಡ್ತಾ ಇದ್ದಾರೆ ರಾಮ್ ಶೆಟ್ಟರು. ಆದರೆ ಈ ಬಾರಿಯ ಸಿನಿಮಾ ಎಲ್ಲ ವಿಚಾರದಲ್ಲೂ ಸಂಪೂರ್ಣ ಡಿಫರೆಂಟ್ ಆಗಿದ್ದು ತುಳು ಚಿತ್ರರಂಗಕ್ಕೊಂದು ಹೊಸ ಆಯಾಮ ನೀಡಲು ಮುಂದಾಗಿದೆ.
`ಸೂಪರ್ ಮರ್ಮಾಯೆ’
`ಹೆಸರೇ ಹೇಳುವಂತೆ ಇದು ಪಕ್ಕಾ ಮನೋರಂಜನಾತ್ಮಕ ಚಿತ್ರ. ಇಲ್ಲಿ ಏಳೆಂಟು ಪಾತ್ರಗಳು ಮಾತ್ರವೇ ಇರುತ್ತವೆ. ` ಮರ್ಮಾಯೆ’ ‘ ಅಂದ್ರೆ ತುಳುವಲ್ಲಿ ಅಳಿಯ ಅನ್ನೋ ಅರ್ಥ. ಶ್ರೀಮಂತ ಕುಟುಂಬವೊಂದರ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುವ ರಿಕ್ಷಾ ಚಾಲಕ ಅದು ಹೇಗೆ ಮಾವನಿಗೆ ತಕ್ಕ ಅಳಿಯ ಆಗ್ತಾನೆ ಅನ್ನೋದು ಚಿತ್ರದ ಕಥಾನಕ’ ಅಂತ ಚಿತ್ರದ ಕಥೆಯನ್ನು ಬಾಯ್ಬಿಡದೆ ಒನ್ ಲೈನ್ನಲ್ಲಿ ಸ್ಟೋರಿ ಹೇಳಿದವರು ಚಿತ್ರಕ್ಕೆ ಕಥೆ ಬರೆದು, ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಮ್ ಶೆಟ್ಟಿ. ನಗರದ ಮಾಲಾಡಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಭೇಟಿಯಾದ ರಾಮ್ ಶೆಟ್ಟಿ ತಮ್ಮ ಚಿತ್ರದ ಕುರಿತು ಹರಟಿದರು.
`ಅಡ್ಯಾರ್ ಮಾಧವ ನಾಕ್ ನಿರ್ಮಾಣದ ಸೂಪರ್ ಮರ್ಮಾಯೆ ಚಿತ್ರದಲ್ಲಿ ಹಾಸ್ಯ ಸಾಕಷ್ಟಿದೆ. ಮಾವನ ಪಾತ್ರ ಗಂಭೀರತೆ ಎಷ್ಟಿದೆಯೋ ಅಷ್ಟೇ ಹಾಸ್ಯ ಪ್ರಧಾನವೂ ಆಗಿದೆ. ಈಗಾಗಲೇ ಕನ್ನಡದ `ವೀರ ಮದಕರಿ’ ಸಿನಿಮಾ ಮತ್ತು `ಕೃಷ್ಣ ರುಕ್ಮಿಣಿ’ ಧಾರಾವಾಹಿಯ ಖಳನಟರಾಗಿ ಮಿಂಚಿದ್ದ ಗೋಪಿನಾಥ್ ಭಟ್ ಮಾವನ ಪಾತ್ರಕ್ಕೆ ಜೀವ ತುಂಬಿದ್ದಾರೆ. `ಪಂಚರಂಗಿ ಪೋಂ ಪೋಂ’ ಧಾರಾವಾಹಿಯ ಖ್ಯಾತ ನಟ ರಾಘವೇಂದ್ರ ರೈ ಅವರು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಡ್ಯುಯೆಟ್ ಹಾಡಿದ್ದಾರೆ. ನಾಯಕಿಯಾಗಿ `ಭಾರತಿ’ ಧಾರಾವಾಹಿ, `ಚಾಲಿಪೋಲಿಲು’ ಚಿತ್ರದ ಖ್ಯಾತ ನಟಿ ದಿವ್ಯಶ್ರೀ ಭಟ್ ಜೊತೆಯಾಗಿದ್ದಾರೆ. ಚಿತ್ರದ ಎರಡನೇ ನಾಯಕಿಯಾಗಿ ಹಿಂದಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಮಣಿಪಾಲ ಮೂಲದ ಮುಂಬೈ ನಿವಾಸಿ ಶ್ರದ್ಧಾ ಸಾಲಿಯಾನ್ ಕಾಣಿಸಿಕೊಳ್ಳಲಿದ್ದಾರೆ’ ಎಂದು ರಾಮ್ ಶೆಟ್ಟಿ ತಮ್ಮ ಚಿತ್ರದ ಕುರಿತು ಮಾಹಿತಿ ನೀಡಿದರು.
ಹಿಂದಿ ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿ ದುಡಿಯುತ್ತಿದ್ದ ಈಜನ್ ಅನ್ನೋ ಖ್ಯಾತ ಕೆಮರಾಮ್ಯಾನ್ `ಸೂಪರ್ ಮರ್ಮಾಯೆ’ ಚಿತ್ರಕ್ಕೆ ಕೆಮರಾ ಹಿಡಿದಿದ್ದಾರೆ. ಚಿತ್ರಕ್ಕೆ ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದರೆ ಚಂದ್ರಕಾಂತ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನವೀನ್ ಶೆಟ್ಟಿ ಅಳಕೆ ಸಂಭಾಷಣೆ ಬರೆದಿದ್ದರೆ, ತಮ್ಮ ಲಕ್ಷ್ಮಣ ಕಲೆಯಲ್ಲಿ ಜೊತೆಯಾಗಿದ್ದಾರೆ.
`ಸ್ಟಂಟ್ ಮಾಸ್ಟರ್ ಸಿನಿಮಾದಲ್ಲಿ ನೋ ಸ್ಟಂಟ್’
`ಬಾಲಿವುಡ್, ಸ್ಯಾಂಡಲ್ ವುಡ್ ಖ್ಯಾತ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟರ ಸಿನಿಮಾದಲ್ಲಿ ಸ್ಟಂಟ್ ದೃಶ್ಯಗಳೇ ಇಲ್ವಾ? ಅಂತ ಕೇಳಿದ್ರೆ ರಾಮ್ ಶೆಟ್ಟರು ನಗುತ್ತಾರೆ. `ಬಂಗಾರ್ದ ಕುರಲ್’ ಚಿತ್ರದಲ್ಲಿ ಸ್ಟಂಟ್ ದೃಶ್ಯಗಳನ್ನು ತೋರಿಸಿದ್ದೇನೆ. ಈ ಚಿತ್ರದಲ್ಲೂ ಸ್ಟಂಟ್ ತೋರಿಸಿದರೆ ಜನರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ತಿಳಿದಿಲ್ಲ. ಹೀಗಾಗಿ ಕಂಪ್ಲೀಟ್ ಕಾಮೆಡಿ ಓರಿಯೆಂಟೆಡ್ ಸಿನಿಮಾ ಮಾಡ್ಬೇಕು ಅಂತ ನಿರ್ಧರಿಸಿದ್ದೀನಿ. ಕ್ಷಮಿಸಿ, ಇಲ್ಲಿ ಸ್ಟಂಟ್ ಇರಲ್ಲ, ಮೂರು ಗಂಟೆ ಸಿನಿಮಾ ಥಿಯೇಟರ್ ನಲ್ಲಿ ಕೂತ್ಕೊಂಡು ನಗೋದಕ್ಕೆ ಏನೇನ್ ಬೇಕೋ ಅದೆಲ್ಲ ಇದೆಲ್ಲ ಈ ಸಿನಿಮಾದಲ್ಲಿ ಇರುತ್ತೆ’ ಅಂತಾರೆ.
ಎರಡು ಹಾಡುಗಳ ಚಿತ್ರೀಕರಣ ಕಂಪ್ಲೀಟ್!
ಸೂಪರ್ ಮಮರ್ಾಯೆ ಚಿತ್ರದ ಎರಡು ಹಾಡುಗಳು ಸಕಲೇಶಪುರದಲ್ಲಿ ಚಿತ್ರೀಕರಣಗೊಂಡಿದೆ. ಇನ್ನುಳಿದ ಹಾಡು ಮತ್ತು ದೃಶ್ಯದ ಚಿತ್ರೀಕರಣ ನಡೆಯಬೇಕಿದೆ. ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಯಲಿದ್ದು, ಒಟ್ಟು 30 ದಿನಗಳ ಶೂಟಿಂಗ್ ನಡೆಯಲಿದೆ ಅಂತಾರೆ ರಾಮ್ ಶೆಟ್ಟಿ.
ರಾಮ್ ಶೆಟ್ಟಿಯವರ ಬಗ್ಗೆ ಬರೆಯಲು ಹೋದರೆ ಪದಗಳು ಸಾಲದು. ತುಳು ಚಿತ್ರರಂಗಕ್ಕೆ ಆರಂಭದ ಮೈಲುಗಲ್ಲು ಎಂದೇ ಕರೆಯಲ್ಪಡುವ `ಬದ್ಕೆರೆ ಬುಡ್ಲೆ’ ಸಿನಿಮಾ ಇದೇ ರಾಮ್ ಶೆಟ್ಟರ ಕಾಣಿಕೆ. 1982ರಲ್ಲಿ ತೆರೆಕಂಡ ಈ ಚಿತ್ರವನ್ನು ರಾಮ್ ಶೆಟ್ಟರು ನಿದರ್ೇಶಿಸಿ ನಿರ್ಮಾಣ ಮಾಡಿದ್ದರು. 1983ರಲ್ಲಿ ದಾರೆದ ಸೀರೆ ಅನ್ನೋ ಮತ್ತೊಂದು ಸೂಪರ್ ಹಿಟ್ ಚಿತ್ರವನ್ನೂ ರಾಮ್ ಶೆಟ್ಟರು ನಿರ್ಮಾಣ ಮಾಡಿ ಸೈ ಅನ್ನಿಸಿಕೊಂಡಿದ್ದರು. ನೂರಾರು ಸಿನಿಮಾಗಳಲ್ಲಿ ದುಡಿದು ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟ-ನಟಿ, ಕಲಾವಿದರನ್ನು ನೀಡಿರುವ ರಾಮ್ ಶೆಟ್ಟಿಯವರ `ಸೂಪರ್ ಮರ್ಮಾಯೆ’ ಚಿತ್ರ ಸೂಪರ್ ಹಿಟ್ ಆಗಲಿ ಅನ್ನೋದು ತುಳುವರ ಆಶಯ.
-ಶಶಿಧರ ಬಂಗೇರ, ಬೆಳ್ಳಾಯರು



























