ಬಂಟ್ವಾಳ: ಮಂಗಳೂರು ಮಹಾನಗರದ ಜನತೆಗೆ ಕುಡಿಯುವ ನೀರು ಒದಗಿಸಲು ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಾಗಾರಿ ಮರು ಪ್ರಾರಂಭಗೊಂಡಿಲ್ಲ. ಕಳೆದ ಮಳೆಗಾಲದ ವೇಳೆಗೆ ಮಳೆಯ ನೆಪವೊಡ್ಡಿ ಕಾಮಗಾರಿನ್ನು ಸ್ಥಗಿತಗೊಳಿಸಿ ಮಳೆಗಾಲ ಮುಗಿದ ಬಳಿಕ ಕೆಲಸ ಪ್ರಾಂಭಿಸುವುದಾಗಿ ತಿಳಿಸಲಾಗಿತ್ತು. ಆದರೆ ಇದೀಗ ಮಳೆಗಾಲ ಮುಗಿದಿದ್ದರೂ ಡ್ಯಾಂ ನಿರ್ಮಾಣ ಕಾಮಗಾರಿ ಪುನರ್ ಆರಂಭಗೊಂಡಿಲ್ಲ.

ಮಂಗಳೂರಿಗೆ ಬ್ರಹ್ಮರಕೂಟ್ಲುವಿನ ತುಂಬೆ ವೆಂಟೆಡ್ ಡ್ಯಾಂನಿಂದ ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಈಗಿರುವ 4 ಮೀಟರ್ ಎತ್ತರದ ಡ್ಯಾಂನಲ್ಲಿ ಸಂಗ್ರಹವಾಗುವ ನೀರನ್ನು ಮಂಗಳೂರಿನ ಜನತೆಗೆ ವರ್ಷಪೂರ್ತಿ ಒದಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಹಳೆ ಡ್ಯಾಂನ ಬಳಿಯೇ ಏಳು ಮೀಟರ್ ಎತ್ತರದ ಹೊಸ ಡ್ಯಾಂ ನಿರ್ಮಿಸಲಾಗುತ್ತಿದೆ.
ಆದರೆ ಹಲವಾರು ಅಡೆತಡಗಳಿಂದಾಗಿ ಕಳೆದ ಹತ್ತು ವರ್ಷಗಳಿಂದ ಆಮೆ ನಡಿಗೆಯಲ್ಲಿ ಸಾಗುತ್ತಿರುವ ಡ್ಯಾಂ ನಿರ್ಮಾಣ ಕಾಮಾಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪ್ರತೀಬಾರಿಯೂ ಇಲ್ಲಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪೊಳ್ಳು ಭರವಸೆಯನ್ನಷ್ಟೇ ನೀಡಿ ತೆರಳುತ್ತಾರೆ. ಮಳೆ ಆರಂಭವಾಗುತ್ತಿದ್ದಂತೆಯೇ ಡ್ಯಾಂ ನಿರ್ಮಾಣ ಕಾಮಾಗಾರಿ ಸ್ಥಗಿತಗೊಂಡಿತ್ತು.
ಮಳೆ ಮುಗಿಯುತ್ತದ್ದಂತೆಯೇ ಮತ್ತೆ ಕಾಮಾಗಾರಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಇನ್ನೂ ಕಾಮಾಗಾರಿ ಆರಂಂಗೊಂಡಿಲ್ಲ. ಬೇಸಿಗೆಯಲ್ಲಿ ಕೆಲಸ ಚುರುಕುಗೊಳಿಸದೆ ದಿನಗಳನ್ನು ವ್ಯರ್ಥವಾಗಿ ಕಳೆಯುವ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆ ಸಕಾರಣ ನೀಡದೆ ಕಾಮಾಗಾರಿಯನ್ನು ವಿಳಂಬಗೊಳಿಸುತ್ತದೆ. ಇದೀಗ ಮಳೆಗಾಲ ಮುಗಿದಿದೆ, ಕಾಮಾಗಾರಿ ಪುನರ್ ಆರಂಭಿಸಲು ಸಕಾಲವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಬೇಕಾಗಿದೆ.


