ಉಡುಪಿ: ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆರ್. ವಿಶಾಲ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಕುಮಾರ ಉಪಸ್ಥಿತರಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಡಾ.ವಿಶಾಲ್ ಮಾಧ್ಯಮದವರ ಜತೆ ಮಾತನಾಡಿ, ಉಡುಪಿ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಆರೋಗ್ಯ, ಶಿಕ್ಷಣ, ಜೀವನ ಮಟ್ಟಗಳಲ್ಲಿ ಬಹಳ ಮುಂದಿದೆ. ಬೇರೆ ಜಿಲ್ಲೆಗಳ ಸಮಸ್ಯೆ ಮತ್ತು ಇಲ್ಲಿನ ಸಮಸ್ಯೆ ಭಿನ್ನವಾದುದು. ಅರಣ್ಯ ಕಾಯ್ದೆಯಿಂದ ಆಗುತ್ತಿರುವ ತೊಂದರೆ, ಭೂಮಿ ಹಕ್ಕು ಮತ್ತಿತರ ಸಮಸ್ಯೆಗಳ ಬಗ್ಗೆ ಅರಿವಿದೆ. ಹಿಂದಿನ ಜಿಲ್ಲಾಧಿಕಾರಿಗಳ ಜತೆಗೆ ಇಲ್ಲಿನ ಅಗತ್ಯಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಒಂದು ಜಿಲ್ಲೆಗೆ ಬರುವಾಗ ಕಲ್ಪನೆಗಳನ್ನು ರೂಪಿಸಿಕೊಂಡು ಬರುವುದು ಒಂದು ಮಾದರಿಯಾದರೆ, ಜಿಲ್ಲೆಗೆ ಬಂದು ಅರ್ಥಮಾಡಿಕೊಂಡು ಅದಕ್ಕೆ ಸರಿಯಾಗಿ ನಮ್ಮ ಕಲ್ಪನೆ, ಯೋಜನೆಗಳನ್ನು ರೂಪಿಸುವುದು ಎರಡನೆಯದ್ದು. ತಾನು ಎರಡನೆಯದ್ದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇಲ್ಲಿನ ಪರಿಸರ, ಇಲ್ಲಿನ ಅಭಿವೃದ್ಧಿ ಎರಡನ್ನೂ ಗಮನಕ್ಕೆ ತೆಗೆದೆಕೊಂಡಿದ್ದೇನೆ. ಪರಿಸರ ಬಿಟ್ಟು ಅಭಿವೃದ್ಧಿ ಮಾಡುವುದು ಸರಿಯಲ್ಲ. ಅದೇ ರೀತಿ ಪರಿಸರವೇ ಮುಖ್ಯವಾಗಿ ಅಭಿವೃದ್ಧಿಯೂ ಹಿಂದುಳಿಯಬಾರದು. ಎರಡೂ ಸಮತೋಲನದಲ್ಲಿ ಸಾಗಬೇಕು ಎಂದು ಹೇಳಿದರು.

