ಕೇರಳದ ತ್ರಿಶೂರ್ ಪೂರಂ ಹಬ್ಬ- ಛತ್ರಿಯಲ್ಲಿ ಸಾವರ್ಕರ್ ಚಿತ್ರಕ್ಕೆ ವಿವಾದ
ತಿರುವನಂತಪುರಂ: ಪರಮೆಕ್ಕಾವು ದೇವಸ್ವಂನಲ್ಲಿ ಮುಂಬರುವ ತ್ರಿಶೂರ್ ಪೂರಂ ಹಬ್ಬದಲ್ಲಿ ಉಪಯೋಗಿಸುವ ಛತ್ರಿಯಲ್ಲಿ ಹಿಂದೂತ್ವದ ಐಕಾನ್ ಆಗಿರುವ ವೀರ ಸಾವರ್ಕರ್ ಅವರ ಚಿತ್ರವನ್ನು ಹಾಕಲು ದೇವಾಲಯದ ಆಡಳಿತ ವರ್ಗ ನಿರ್ಧರಿಸಿತ್ತು. ಆದರೆ ಇದೀಗ ಇದು ವಿವಾದಕ್ಕೆ ಒಳಗಾಗಿದೆ.
ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಕೇರಳದ ಇತರ ಪ್ರಮುಖ ನಾಯಕರು ಸೇರಿದಂತೆ ವಿವಿಧ ನವೋದಯ ಮತ್ತು ಸ್ವಾತಂತ್ರ್ಯ ಚಳವಳಿಯ ನಾಯಕರನ್ನು ಒಳಗೊಂಡ ಛತ್ರಿಗಳಲ್ಲಿ ಸಾವರ್ಕರ್ ಅವರ ಚಿತ್ರವನ್ನೂ ಹೊಂದಿದ್ದವು. ಈ ನಿರ್ಧಾರಕ್ಕೆ ಕಾಂಗ್ರೆಸ್ ಹಾಗೂ ಸಿಪಿಐ(ಎಂ) ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ದೇವಾಲಯದ ಅಧಿಕಾರಿಗಳು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಈ ಬಗ್ಗೆ ದೇವಸ್ವಂ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಥವಾ ದೇಗುಲಕ್ಕೆ ಧಕ್ಕೆಯಾಗುವ ಅಥವಾ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ. ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿರುವ ತ್ರಿಶೂರ್ ಪೂರಂ ಅನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ತ್ರಿಶೂರ್ ಪೂರಂ ರಾಜಕೀಯಕ್ಕಿಂತ ಮೇಲಿದೆ ಎಂದರು.
ಮಂಡಳಿಯು ಛತ್ರಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ದೇವಾಲಯದ ಅಧಿಕಾರಿಗಳು ತ್ರಿಶೂರ್ ಪೂರಂ ಬಗ್ಗೆ ಯಾವುದೇ ವಿವಾದಗಳನ್ನು ಬಯಸುವುದಿಲ್ಲ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ನಾಯಕಿ ಪದ್ಮಜಾ ವೇಣುಗೋಪಾಲ್ ಮಾತನಾಡಿ, ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ರಂತಹ ಇತರ ಪ್ರಮುಖ ನಾಯಕರೊಂದಿಗೆ ಸಾವರ್ಕರ್ ಅವರ ಚಿತ್ರವನ್ನು ಸೇರಿಸುವ ಮೂಲಕ ಸಂಘ ಪರಿವಾರದ ಅಜೆಂಡಾವನ್ನು ತ್ರಿಶೂರ್ ಪೂರಂನಲ್ಲಿ ಬಲವಂತವಾಗಿ ಹಾಕಲಾಗಿದೆ ಎಂದು ವಾಗ್ದಾಳಿ ನಡೆಸಿದರು