ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಂಟ್ರಾಕ್ಟರ್ಸ್ ಎಸೋಶಿಯೇಷನ್ ಮಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಬೆಂಗಳೂರು ಇದರ ಸಹಯೋಗದಲ್ಲಿ 2 ದಿನಗಳ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವು ಪುತ್ತೂರಿನ ಮಂಜಲ್ಪಡ್ಪು ಸುಧಾನ ಶಾಲಾ ವಠಾರದಲ್ಲಿ ನ.8-9 ರಂದು ನಡೆಯಲಿದೆ. ಈ ಬಗ್ಗೆ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಂಚಿ ಬುಧವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಿ ಈ ಶಿಬಿರದಲ್ಲಿ ರೋಗ ಪತ್ತೆಯಾದರೆ ಅಂತಹ ರೋಗಿಗಳನ್ನು ಸಂಘದ ವತಿಯಿಂದಲೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಈಗಾಗಲೆ ಕ್ಯಾನ್ಸರ್ ರೋಗ ಇರುವ ರೋಗಿಗಳು ಕೂಡಾ ಈ ಶಿಬಿರದಲ್ಲಿ ತಪಾಸಣೆ ನಡೆಸಲು ಅವಕಾಶವಿದೆ. ಕಿದ್ವಾಯಿ ಸಹಿತ ವಿವಿಧ ಆಸ್ಪತ್ರೆಯ ತಜ್ಞ ವೈದ್ಯರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಶಿಬಿರದ ಉದ್ಘಾಟನೆ ನೆರವೇರಿಸಲಿರುವರು.ಶಾಸಕರು ,ಸಂಸದರು,ಸಚಿವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯದ ಮೇಲೆ ಕ್ಯಾನ್ಸರ್ ನಿಂದ ಉಂಟಾಗುವ ಸಮಸ್ಯೆಯನ್ನು ಗಮನಿಸಿ ಸಂಘ ಇದರ ಪರಿಹಾರ ಕಾರ್ಯದತ್ತ ಹೆಜ್ಜೆ ಇಟ್ಟಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ರೋಹಿತಾಕ್ಷ,ಚಿತ್ತರಂಜನ್ ಕಲ್ಲಡ್ಕ, ನಾರಾಯಣ ಪೂಜಾರಿ, ಎ.ಹೆಚ್ ಬಾವ ಮೊದಲಾದವರಿದ್ದರು.
