ಹೈದರಾಬಾದ್: ನನ್ನ ಪತಿ ತನ್ನೊಂದಿಗೆ ಬದುಕುತ್ತೇನೆ ಮತ್ತು ಸಾಯುತ್ತೇನೆ ಎಂದಿದ್ದರು. ಅಷ್ಟೇ ಅಲ್ಲದೇ ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದು ಹೇಳಿದ್ದರು ಎಂದು ಹತ್ಯೆಯಾದ ನಾಗರಾಜು ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ ಹೇಳಿದ್ದರು.

ಅಲ್ಲದೇ ತನ್ನ ಸಹೋದರ ಕೋಪಿಷ್ಟ ಮತ್ತು ಮದುವೆಯಾದರೆ ಜೀವ ಬೆದರಿಕೆಯೊಡ್ಡಬಹುದು ಅಂತ ಎಚ್ಚರಿಕೆ ನೀಡಿದಾಗಲೂ ನಾನು ನಿನಗೋಸ್ಕರ ಸಾಯಲು ಕೂಡ ಸಿದ್ಧ ಎಂದಿದ್ದರು ಎಂದು ಹೈದರಾಬಾದ್ನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಹತ್ಯೆಗೀಡಾದ ನಾಗರಾಜು(25) ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ (ಪಲ್ಲವಿ) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನನ್ನಿಂದ ನಾಗರಾಜು ಅವರ ಜೀವಕ್ಕೆ ಯಾವುದೇ ಅಪಾಯವಾಗಬಾರದು ಎಂದು ನಮ್ಮ ಮದುವೆಗೆ ಒಂದು ತಿಂಗಳು ಮುನ್ನವೇ ಅವರಿಗೆ ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದೆ. ಆದರೆ ನಮ್ಮಿಬ್ಬರ ಪ್ರೀತಿಯ ವಿಚಾರ ತಿಳಿದು ಮನೆಯವರು ನಾಗರಾಜು ಅವರು ಕೆಲಸದಲ್ಲಿದ್ದಾಗ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದರು.
ಘಟನೆ ವೇಳೆ ನನ್ನ ಗಂಡ ಸಹಾಯಕ್ಕಾಗಿ ಬೇಡಿಕೊಂಡರೂ ಯಾರೂ ಕೂಡ ಸಹಾಯ ಮಾಡಲು ಬರಲಿಲ್ಲ. ನೋಡುಗರು ಸಹಾಯ ಮಾಡಿದ್ದರೆ ಇಂದು ನನ್ನ ಪತಿ ಬದುಕಿರುತ್ತಿದ್ದರು.ನಮಗಷ್ಟೇ ಅಲ್ಲ, ಜಗತ್ತಿನಲ್ಲಿ ಎಲ್ಲಿಯಾದರೂ ಇಂತಹ ಘಟನೆ ನಡೆದಾಗ ಜನರು ಸಹಾಯಕ್ಕೆ ಬರಬೇಕು. ಆದರೆ 15-20 ನಿಮಿಷಗಳ ಕಾಲ ಹಲ್ಲೆ ನಡೆಸುತ್ತಿದ್ದರೂ, ಯಾರು ಕೂಡ ಸಹಾಯ ಮಾಡಲಿಲ್ಲ ಎಂದು ಕಣ್ಣೀರಿಟ್ಟಿದ್ದರು.
