ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಎ.29ರಂದು ಶುಕ್ರವಾರ ರಾತ್ರಿ ಆರಂಭಗೊಂಡ ಒಂದು ತಿಂಗಳ ಕರಾವಳಿ ಕಲೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಇವರಿಗೆ ‘ಕರಾವಳಿ ಸೌರಭ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಲ್ಲಿನ ಚಿಣ್ಣರಲೋಕ ಮೋಕೆದ ಕಲಾವಿದರ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ‘ಕರಾವಳಿ ಕಲೋತ್ಸವ- ೨೦೨೨’ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಸಂಭ್ರಮದ ಚಾಲನೆ ನೀಡಲಾಯಿತು.
ಕೀರ್ತಿ ಶೇಷ ಡಾ. ಲಕ್ಷ್ಮೀನಾರಾಯಣ ಆಳ್ವ ವೇದಿಕೆ, ಚಿಣ್ಣರ ಚಿತ್ರಕಲೆ ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್, ವಿವಿಧ ಮಳಿಗೆ ಸಹಿತ ಕರಾವಳಿ ಕಲೋತ್ಸವ-೨೦೨೨ ಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಇದೇ ವೇಳೆ ಚಿಣ್ಣರಲೋಕ ನಿರಾಶ್ರಿತರ ಸೇವಾಶ್ರಮದ ನೀಲ ನಕ್ಷೆ ಅನಾವರಣಗೊಳಿಸಿದರು. ಕಲೆಗೆ ಜಾತಿ, ಧರ್ಮದ ಪರೆದೆ ಇಲ್ಲ ಎಂದು ಅವರು ಹೇಳಿದರು.
ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿಣ್ಣರ ಅಧ್ಯಕ್ಷೆ ಜನ್ಯ ಪ್ರಸಾದ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಕೆ.ಹರೀಶ ಕುಮಾರ್ ಮಾತನಾಡಿದರು.
ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರನಾಥ ಕೊಟ್ಟಾರಿ ತೇವು, ಉದ್ಯಮಿ ಶಿವಚರಣ್, ತುಳು ಸಾಹಿತ್ಯ ಅಕಾಡಮಿ ಸದಸ್ಯ ಚೇತನ್ ಪೂಜಾರಿ, ನಿವೃತ್ತ ಬಾಂಕ್ ಉದ್ಯೋಗಿ ಬೇಬಿ ಕುಂದರ್, ಟ್ರಸ್ಟ್ ನ ಮಂಗಳೂರು ಸಂಚಾಲಕಿ ವಿಶಾಲಾಕ್ಷಿ ಮತ್ತಿತರರು ಇದ್ದರು.
ಇದೇ ವೇಳೆ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಇವರಿಗೆ ‘ಕರಾವಳಿ ಸೌರಭ ‘ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲಪ್ರತಿಭೆಗಳಾದ ಕ್ಷಿತಿ ಕೆ.ರೈ ಧರ್ಮಸ್ಥಳ, ಶೃತಿ ದೇವಾಡಿಗ ಬಿ.ಸಿ.ರೋಡು ಇವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಸರಪಾಡಿ ಆಶೋಕ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಪ್ರಾಸ್ತಾವಿಕ ಮಾತನಾಡಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
