ವಿಜಯಪುರ: ಮಾಜಿ ಸಚಿವ ಈಶ್ವರಪ್ಪನವರನ್ನು ಜೈಲಿಗೆ ಹಾಕೋದಲ್ಲ. ಮೊದಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಜೈಲಿಗೆ ಹಾಕಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರುವಷ್ಟು ಶಕ್ತಿ ಇದೆ. ಅದೇ ದೆಹಲಿಯಲ್ಲಿ ನಿಮ್ಮನ್ನ ಜೈಲಿಗೆ ಹಾಕಿದಾಗ ಬಿಪಿ, ಶುಗರ್ ಹೆಚ್ಚಾಗಿದೆಯಂತೆ ಹೇಳಿದ್ದೀರಿ ಎಂದು ಡಿಕೆ ಶಿವಕುಮಾರ್ ಕಾಲೆಳೆದರು.

ನೀವು ಬ್ಯಾರಿಕೇಡ್ ಜಿಗಿಯುತ್ತೀರಿ ಅಂದರೆ ನೀವು ಫಿಟ್ ಆಗಿದ್ದೀರಿ ಅಂತಾ ಅರ್ಥ. ಹೀಗಾಗಿ ನೀವು ಆರೋಗ್ಯಕರವಾಗಿ ಇದ್ದೀರಿ. ಆರೋಗ್ಯ ಸಮಸ್ಯೆ ಹೇಳಿ ಜೈಲಿನಿಂದ ಹೊರಗೆ ಬಂದಿದ್ದೀರಿ. ಇದನ್ನು ಕೋರ್ಟ್ ಪರಿಗಣಿಸಿ ಮತ್ತೆ ಜೈಲಿಗೆ ಡಿಕೆ ಶಿವಕುಮಾರ್ ಅವರನ್ನು ಕಳಿಸಬೇಕು ಎಂದು ಒತ್ತಾಯಿಸಿದರು.

