ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಎಪ್ರಿಲ್ ೧೨ರಂದು ಸಾಗರೋಪಾದಿಯಲ್ಲಿ ಆಗಮಿಸುವ ಭಕ್ತಜನರು ಸಾಕ್ಷಿಯಾಗುತ್ತಲೇ ಅದ್ದೂರಿ ಮಹಾ ರಥೋತ್ಸವ ಸಂಪನ್ನಗೊಳ್ಳುತ್ತದೆ.

ಪೊಳಲಿ ಚೆಂಡು :
ಜಾತ್ರೆಯ ಕೊನೆಯ ಐದು ದಿನಗಳಿರುವಾಗ ಐದು ದಿನಗಳ ಚೆಂಡು ಉತ್ಸವ ನಡೆಯುತ್ತದೆ. ಈ ಬಾರಿ ಎ. ೧೧ರಂದು ಸೋಮವಾರ ಕಡೇ ಚೆಂಡು ನಡೆದಿದ್ದು, ಮರುದಿನ ಎ. ೧೨ರಂದು ಮಂಗಳವಾರ ಮಹಾರಥೋತ್ಸವ ನಡೆಯುತ್ತದೆ. ದೇವಸ್ಥಾನದ ಪಕ್ಕದಲ್ಲಿರುವ ಬೃಹತ್ ಚೆಂಡಿನ ಗದ್ದೆಯಲ್ಲಿ ಚೆಂಡಾಟ ನಡೆಯುತ್ತದೆ. ಇದು ”ಪುರಲ್ದ ಚೆಂಡ್” ಎಂದೇ ಹೆಸರುವಾಸಿ. ಚೆಂಡಾಟ ನಡೆಯುವ ಐದು ದಿನವೂ ಅಮ್ಮುಂಜೆ ಮತ್ತು ಮಳಲಿಯ ಯುವಜನರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತದೆ. ಹೆಚ್ಚು ಗೋಲು ಮಾಡಿದವರಿಗೆ ವರ್ಷದ ಊರಿನ ಮರ್ಯಾದೆ ಸಲ್ಲುತ್ತದೆ. ಆರಂಭದ ಚೆಂಡಾಟದಲ್ಲಿ ಮಕ್ಕಳು ಮತ್ತು ಯುವಕರು ಭಾಗವಹಿಸಿದರೆ, ಕೊನೆಯ ಎರಡು ಚೆಂಡಾಟದಲ್ಲಿ ಹಿರಿಯರು ಸೆಣಸಾಡುತ್ತಾರೆ. ಜಿದ್ದಾಜಿದ್ದಿನ ಈ ಚೆಂಡಾಟ ನೋಡುವುದೇ ಸೊಬಗು. ಚೆಂಡು ನೋಡಲು ಗದ್ದೆಯ ಸುತ್ತ ಸಾವಿರಾರು ಪ್ರೇಕ್ಷಕರಿರುತ್ತಾರೆ. ಪೊಳಲಿ ಚೆಂಡಿಗೆ ದೈವೀಕ ಹಿನ್ನೆಲೆ ಇದೆ.

ಐದು ದಿನದ ಚೆಂಡಿನ ಸಂದರ್ಭದಲ್ಲಿ ಐದು ರೀತಿಯ ರಥ ಎಳೆಯಲಾಗುತ್ತದೆ. ನಾಲ್ಕನೇ ಚೆಂಡಿನವರೆಗೆ ದೇವಸ್ಥಾನದೊಳಗಡೆಯೇ ಹೂವಿನ ರಥ, ಬೆಳ್ಳಿ ರಥ… ಎಳೆದರೆ, ಐದನೇ ದಿನದಂದು ಮಹಾರಥೋತ್ಸವ ನಡೆಯುತ್ತದೆ. ಜಿಲ್ಲೆಯ ಬಹುತೇಕ ದೊಡ್ಡ ದೇವಸ್ಥಾನಗಳಲ್ಲಿ ರಥೋತ್ಸವ ನಡೆಯುವುದು ರೂಢಿ. ಆದರೆ ಇಲ್ಲಿನ ಮಹಾರಥೋತ್ಸವ ದೇವಸ್ಥಾನಕ್ಕೆ ಒಂದು ಸುತ್ತ ಎಳೆದು, ಚೆಂಡಿನ ಗದ್ದೆಯಲ್ಲಿ ಸರ್ವಾಂಕೃತ ರಥ ವಿರಾಜಮಾನವಾಗುತ್ತದೆ. ಅಲ್ಲಿ ಸುಡು ಮದ್ದು ಸುಡಲಾಗುತ್ತದೆ. ಬಾನಂಗಳಕ್ಕೆ ಪಟಾಕಿ ಬೆಳಕು ಚೆಲ್ಲುತ್ತದೆ. ಸುಮಾರು ಎರಡು ತಾಸು ಪಟಾಕಿ ಸಿಡಿಸಲಾಗುತ್ತದೆ. ಬಳಿಕ ಮಹಾರಥವನ್ನು ದೇವಸ್ಥಾನದ ಎದುರು ಭಾಗಕ್ಕೆ ಎಳೆದು ತಂದು ನಿಲ್ಲಿಸಲಾಗುತ್ತದೆ.
ಸಾಲುಸಾಲು ಸಂತೆ !
ಪೊಳಲಿ ಜಾತ್ರೆಯ ಕೊನೆಯ ಮರ್ನಾಲ್ಕು ದಿನಗಳಲ್ಲಿ ನೂರಾರು ಅಂಗಡಿಗಳು ತೆರೆದುಕೊಳ್ಳುತ್ತವೆ. ದೇವಸ್ಥಾನದ ಹೊರಗಡೆ ಹೆಜ್ಜೆ ಹಾಕಿದರೆ, ಸಾಲುಸಾಲಾಗಿ ತೆರೆದುಕೊಂಡಿರುವ ಪಾತ್ರೆ-ಪರಡಿ, ಮಕ್ಕಳಾಟದ ಸಾಮಗ್ರಿ, ಮಕ್ಕಳಿಗಾಗಿ ಅತ್ಯಾಧುನಿಕ ತೊಟ್ಟಿಲು, ಜಾದೂ ಪ್ರದರ್ಶನ, ಐಸ್ಕ್ರೀಂ, ತಂಪು ಪಾನೀಯ, ಹಲಸಿನ ಹಣ್ಣು, ಕಬ್ಬಿನ ಹಾಲು, ಸಿಹಿ ತಿಂಡಿ ಅಂಗಡಿಗಳು, ಸ್ವೀಟ್ ಮತ್ತು ಹೋಟೆಲ್ಗಳು… ಹೀಗೆ ನೂರಾರು ಅಂಗಡಿಗಳಲ್ಲಿ ಜನರು ಗಿಜಿಗಿಟ್ಟಿದರೆ, ಆಟಿಕೆಗಳ ಚೀರಾಟ ನಾಲ್ದೆಸೆಯಲ್ಲೂ ಪ್ರತಿಧ್ವನಿಸುತ್ತದೆ. ಒಟ್ಟಾಗಿ ಸಂತೆಯ ಸೊಬಗು ಪೊಳಲಿ ಜಾತ್ರೆಗೆ ವಿಶೇಷ ಮೆರಗು ಆಗಿರುತ್ತದೆ.

ಪೊಳಲಿ ಬಚ್ಚಂಗಾಯಿ :
ಬಚ್ಚಂಗಾಯಿ ಎಂದರೆ ಕಲ್ಲಂಗಡಿ. ಇಲ್ಲಿನ ಕಲ್ಲಂಗಡಿ ವಿಶೇಷ ಗಾತ್ರ, ಬಣ್ಣ ಹಾಗೂ ರುಚಿ ಹೊಂದಿದೆ. ಈ ಬಾರಿ ಒಂದು ದೊಡ್ಡ ಹಣ್ಣಿನ ಬೆಲೆ ೩೫೦ರವರೆಗೆ ಮುಟ್ಟಿದೆ. ಸಣ್ಣ ಗಾತ್ರದ ಬಚ್ಚಂಗಾಯಿಗೆ ೧೦೦, ೧೫೦, ೨೦೦ ರೂ ನಿಗದಿಪಡಿಸಲಾಗಿದೆ. ಪೊಳಲಿ ಜಾತ್ರೆಗೆ ಬಂದವರು ಮನೆಗೆ ಹೋಗುವಾಗ ಒಂದು ಬಚ್ಚಂಗಾಯಿ ಕೊಂಡೊಯ್ಯುವುದು ಇಲ್ಲಿನ ಪ್ರತೀತಿ. ಆದರೆ ಈಗ ನಿತ್ಯವೂ ಸಾಮಾನ್ಯ ಮಾರುಕಟ್ಟೆಯಲ್ಲಿ ಕಡಿಮೆ ದರದ ಕಲ್ಲಂಗಡಿ ಲಭ್ಯ ಇರುವುದರಿಂದ ಇಲ್ಲಿನ ಬಚ್ಚಂಗಾಯಿಗೆ ಬೇಡಿಕೆ ಕಡಿಮೆಯಾಗಿದೆ. ಅಂತೆಯೇ ಬಚ್ಚಂಗಾಯಿ ಬೆಳೆಯುವ ಸ್ಥಳೀಯ ಕೃಷಿಕರ ಸಂಖ್ಯೆಯೂ ಇಳಿಮುಖವಾಗಿದೆ. ಏನೇ ಇದ್ದರೂ, ಪೊಳಲಿ ಜಾತ್ರೆಯಲ್ಲಿ ಬಚ್ಚಂಗಾಯಿ ದೇವರ ಪ್ರಸಾದ ಎಂದೆನ್ನುವವರು ಮನೆಗೆ ಒಂದಾದರೂ ಹಣ್ಣು ಕೊಂಡೊಯ್ಯುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ೫೦ಕ್ಕೆ ಮೇಲ್ಪಟ್ಟು ಕಲ್ಲಂಗಡಿ ಮಾರಾಟದಂಗಡಿಗಳಿರುತ್ತವೆ.

ಎಲ್ಲ ದಿನಗಳಲ್ಲಿ ಪೊಳಲಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. ದಂಡಮಾಲೆಯಂದು ಹೂವಿನ ದಂಡೆಗೆ ಮಹತ್ವವಿದ್ದು, ಇದನ್ನೇ ದಂಡಮಾಲೆ ಎನ್ನುತ್ತಾರೆ. ಪ್ರತಿ ದಂಡಮಾಲೆಯಂದು ದೇವರ ಎದುರು ತುಲಾಭಾರ ನಡೆದಿದ್ದು, ಭಕ್ತರು ದೇವಿಗೆ ಹರಕೆ ಹೊತ್ತಿರುವಂತೆ ದವಸಧಾನ್ಯ, ಬೆಲ್ಲ, ಅಕ್ಕಿ, ಸಕ್ಕರೆ ಇನ್ನಿತರ ಸೊತ್ತುಗಳಿಂದ ತುಲಾಭಾರ ಮಾಡಿಸಿ ಪುನೀತರಾಗುವುದು ಇಲ್ಲಿನ ಪ್ರತೀತಿ. ಏನೇ ಇದ್ದಾಗಲೂ ಒಂದು ತಿಂಗಳ ಜಾತ್ರೆ ಕಣ್ಣುಮುಚ್ಚಿ ತೆರೆಯುವುದರಲ್ಲಿ ಕೊನೆಯಾಯಿತೋ ಎಂಬಂತೆ ಭಾಸವಾಗುತ್ತದೆ. ಇಂದು(ಎ. ೧೨) ಮಹಾರಥೋತ್ಸವ. ಸಾವಿರಾರು ಆಸ್ತಿಕ ಬಂಧುಗಳು ಇಂದು(ಎ. ೧೨) ದೇವರ ದರ್ಶನದೊಂದಿಗೆ ರಥೋತ್ಸವದ ಚೆಂದ ಕಣ್ತುಂಬಿಸಿಕೊಳ್ಳುತ್ತಾರೆ.

