ಮುಂಬಯಿ: ಕೊರೋನಾದಂತಹ ಕಾಯಿಲೆಗಳು ಬರಲಿ ಹೋಗಲಿ ಆದರೆ ರಾಮಚಂದ್ರನು ಮಾತ್ರ ಪ್ರತೀವರ್ಷ ಬಂದು ನಮ್ಮನ್ನೆಲ್ಲ ಹರಸಿ ಹೋಗುವನು. ಶ್ರೀರಾಮ ಶ್ರೀರಕ್ಷೆಯಿದ್ದರೆ ಭಕ್ತರಿಗೆ ಯಾವ ಕೊರೋನಾದ ಬಾಧಕವೂ ಆಗಿಲ್ಲ. ಇನ್ನೂ ಆಗದು. ನಮ್ಮೆಲ್ಲರ ಮನೆಗಳಲ್ಲೇ ರಾಮಚಂದ್ರನ ಅವತಾರದ ಚಿತ್ರಣ, ಗುಡಿಪಾಡ್ವದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಸರ್ವಲೋಕಕ್ಕೆ ಸರ್ವಮಂಗಳವನ್ನುಂಟು ಮಾಡುವ ದೇವರೇ ಮರ್ಯಾದ ಪುರುಷೋತ್ತಮನೇ ಶ್ರೀರಾಮ. ನಿರೋಗವಾದ ಯೋಗದ ಆರೋಗ್ಯಕರ ಮಾನಸ್ಥಿಕ ಸ್ಥಿತಿಯಲ್ಲಿ ಸದಾ ಸರ್ವದಾ ಸಮಸ್ಥಿತಿಯೊಂದಿಗೆ ಆನಂದಸ್ಥಿತಿಯನ್ನು ಪ್ರಾಪ್ತಿಸುವ ಶ್ರೀರಾಮನ ಜೀವನ ವೈಭವ ನಾವೆಲ್ಲರೂ ಅರಿತು, ರೂಢಿಸಿದಾಗಲೇ ನಮ್ಮ ಜೀವನ ಪಾವನ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ತಿಳಿಸಿದರು.
೨೦೨೨ನೇ ಸಾಲಿನ ಹಾಗೂ ಮುಂಬಯಿ ಶಾಖೆಯ ೨೫ನೇ ವಾರ್ಷಿಕ ಶ್ರೀ ರಾಮನವಮಿ ಉತ್ಸವದ ಪೂರ್ವ ಸಿದ್ಧತೆಯಾಗಿಸಿ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯ ಸಭಾಂಗಣದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಾರ್ಷಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನಿತ್ತು ರಾಮಾಯಣ ಪ್ರವಚನ ನಡೆಸಿ ವಿಶ್ವಪ್ರಿಯತೀರ್ಥ ಶ್ರೀಪಾದರು ನೆರೆದ ಸದ್ಭಕ್ತರನ್ನು ಹರಸಿದರು.
ಅದಮಾರು ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಜಿ ಅನುಗ್ರಹಿಸಿ ಹಿಂದುಗಳಿಗೆ ಪ್ರತಿದಿನವೂ ಹಬ್ಬವೇ ಆಗಿದ್ದು ಪ್ರತಿಯೊಂದು ನೂತನವೇ ಆಗಿ ಹೊಸತನವನ್ನೇ ತರುತ್ತದೆ. ಪ್ರತೀದಿನಗಳು ಶ್ರೀ ದೇವರನ್ನು ತಿಳಿಯಲು ಹೊಸದಾಗಿ ಹುಟ್ಟುತ್ತದೆ. ಮನುಜನಲ್ಲಿ ಶಾಸ್ತ್ರಾವಲೋಕನ ಆಗಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ. ಆವಾಗ ದೇವರು ಅನ್ನುವವರು ಯಾರು ಎಂದು ತಿಳಿಯುವುದು. ಇದಕ್ಕೆ ಶಾಸ್ತ್ರದ ಮೂಲಕ ಉತ್ತರ ಹುಡುಕಬೇಕಾಗುತ್ತದೆ. ಇದು ಇಂತಹ ಪ್ರವಚನಗಳಿಂದ ಮಾತ್ರ ಸಾಧ್ಯವಾಗುವುದು ಎಂದರು.
ಶ್ರೀ ವಿಶ್ವಪ್ರಿಯ ಸ್ವಾಮಿಜಿ ಹಾಗೂ ಶ್ರೀ ಈಶಪ್ರಿಯ ಸ್ವಾಮಿಜಿ ಮಠದಲ್ಲಿನ ಶ್ರೀದೇವರಿಗೆ ಪೂಜಾಧಿಗಳನ್ನು ನೆರವೇರಿಸಿ ಆರತಿಗೈದು ಪ್ರವಚನ ನಡೆಸಿದರು. ಆದಿಯಲ್ಲಿ ವಿಠಲ ಭಜನಾ ಮಂಡಳಿ ಮೀರಾರೋಡ್ ತಂಡವು ಭಜನೆ ನಡೆಸಿತು. ಶ್ರೀಪಾದರು ನೆರೆದ ಭಕ್ತರಿಗೆ, ಭಜನಾ ಮಂಡಳಿ ಸದಸ್ಯರಿಗೆ ಶ್ರೀಪಾದರು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಅದಮಾರು ಮಠ ಮುಂಬಯಿ ಶಾಖೆಯ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಸುಖಾಗಮನ ಬಯಸಿ ಪ್ರಸ್ತಾವನೆಗೈದು ಇಲ್ಲಿನ ಶ್ರೀ ರಾಮನವಮಿ ಉತ್ಸವಕ್ಕೆ ರಜತೋತ್ಸವದ ಸಂಭ್ರಮ ಎಂದರು.
ಕಾರ್ಯಕ್ರಮದಲ್ಲಿ ಪರೇಲ್ ಶ್ರೀನಿವಾಸ ಭಟ್, ಪುರೋಹಿತರಾದ ಪಿ.ಕೆ ತಂತ್ರಿ, ಸರ್ವಜ್ಞ ಉಡುಪ, ಬಾಲಕೃಷ್ಣ ಉಡುಪ, ನಾರಾಯಣ ದೇಸಾಯಿ, ಗಿರಿಧರ್ ರಾವ್ ಶಿರಶಿ, ಸುಧೀರ್ ಆರ್.ಎಲ್.ಭಟ್, ಇಂದಿರಾ ಎಸ್.ಉಡುಪ, ವಾಣಿ ರಾಜೇಶ್ ರಾವ್, ಶ್ರೀಷ ಆರ್.ರಾವ್ ಸೇರಿದಂತೆ ಅನೇಕ ಗಣ್ಯರು, ಪುರೋಹಿತರು ಉಪಸ್ಥಿತರಿದ್ದರು. ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಅಭಾರ ವ್ಯಕ್ತಪಡಿಸಿದರು.
ಎ.೦೨ನೇ ಶನಿವಾರ ದಿಂದ ಎ.೧೦ರ ರವಿವಾರ ರಾಮನವಮಿ ತನಕ ದಿನಂಪ್ರತಿ ಸಂಜೆ ೫.೩೦ ರಿಂದ ರಾತ್ರಿ ೭.೦೦ ಗಂಟೆ ತನಕ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಅವರು ರಾಮಾಯಣ ಪ್ರವಚನ ನೀಡಿ ಅನುಗ್ರಹಿಸಲಿದ್ದಾರೆ. ಎ.೧೦ನೇ ರವಿವಾರ ರಾಮ ನವಮಿ ದಿನ ಬೆಳಿಗ್ಗೆ ೭.೦೦ ಗಂಟೆಯಿಂದ ರಾತ್ರಿ ೮.೩೦ ಗಂಟೆ ತನಕ ವಿವಿಧ ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ರಾಮ ನವಮಿ ಸಂಭ್ರಮಿಸಲಾಗುವುದು. ಆ ಪ್ರಯುಕ್ತ ಮಹಾನಗರದಲ್ಲಿನ ಭಕ್ತರೆಲ್ಲರೂ ಆಗಮಿಸಿ ಪ್ರವಚನ, ಪೂಜಾಧಿಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಅದಮಾರು ಮಠ ಮುಂಬಯಿ ಶಾಖೆಯ ಲಕ್ಷ್ಮಿನಾರಾಯಣ ಮುಚ್ಚಿಂತ್ತಾಯ ಮತ್ತು ಪಡುಬಿದ್ರಿ ರಾಜೇಶ್ ರಾವ್ ಈ ಮೂಲಕ ತಿಳಿಸಿದ್ದಾರೆ.
