ಕೈಕಂಬ: ರಾಷ್ಟ್ರೀಯ ಹೆದ್ದಾರಿ ೧೬೯ರ ಉಪ್ಪುಗೂಡು ಶ್ರೀ ಕ್ಷೇತ್ರ ವಜ್ರದೇಹಿ ಮಠದ ಬಳಿ ಮಾ.13ರಂದು ಭಾನುವಾರ ಅಪರಾಹ್ನ ಮಂಗಳೂರಿಗೆ ಸಾಗುತ್ತಿದ್ದ ಖಾಲಿ ಟ್ಯಾಂಕರ್ ಹಾಗೂ ಬೈಕ್ ಅಪಘಾತಕ್ಕೀಡಾಗಿ ಹೆದ್ದಾರಿಯಿಂದ ಕೆಳಗುರುಳಿ ಬಿದ್ದಿದ್ದು, ಬೈಕ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಬೈಕ್ ಸವಾರ ಮನೀಶ್ ಯಾನೆ ಮುನ್ನ(೩೦) ಗುರುಪುರದ ನಿವಾಸಿಯಾಗಿದ್ದು, ಅಪರಾಹ್ನ ೨:೫೦ರ ಸುಮಾರಿಗೆ ಟ್ಯಾಂಕರ್-ಬೈಕ್ ಡಿಕ್ಕಿಯಾಗಿದೆ. ಅಪಘಾತದ ವೇಳೆ ಟ್ಯಾಂಕರ್ನ ಮುಂಭಾಗದ ಟಯರ್ ಮಧ್ಯೆ ಮನೀಶ್ ಬೈಕ್ ಸಹಿತ ಸಿಲುಕಿದ್ದ. ಸುಮಾರು ಒಂದೂವರೆ ತಾಸು ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದರೂ, ಕಾಲಿಗೆ ಗಂಭೀರ ಗಾಯವಾಗಿರುವ ಆತನನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

