ಮುಂಬಯಿ : ಶ್ರೀ ಭಾರತೀ ಸಮೂಹ ಸಂಸ್ಥೆಯು ಕೇವಲ ಶೈಕ್ಷಣಿಕ ಪ್ರವರ್ಧನೆಗೆ ಮಾತ್ರ ಸೀಮಿತಗೊಂಡಿಲ್ಲ. ಸಾಮಾಜಿಕ ಹಾಗೂ ವಿಶೇಷವಾಗಿ ಸಾಹಿತ್ಯಾತ್ಮಕ ವಿಚಾರಗಳಿಗೆ ಸದಾ ಮುಂಚೂಣಿಯಲ್ಲಿ ನಿಂತು ಸ್ಪಂದಿಸುತ್ತದೆ. ಆದುದರಿಂದ ಕನ್ನಡ ಸಾಹಿತ್ಯ ಪರಿಷತ್ತ್ ಅಂತಹ ಭಾಷಾ ಪ್ರವರ್ತಕ ಸಂಸ್ಥೆಗಳ ಪ್ರಗತಿಪರ ಕಾರ್ಯಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದು ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಂ.ತಿರುಮಲೇಶ್ವರ ಭಟ್ ಅಭಿಪ್ರಾಯಪಟ್ಟರು.
ಮಂಗಳೂರು ನಂತೂರು ಪದವು ಶ್ರೀ ಭಾರತೀ ಸಮೂಹ ಸಂಸ್ಥೆ ಸಮುಚ್ಚಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ತಿರುಮಲೇಶ್ವರ ಭಟ್ ಮಾತನಾಡಿದರು.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ತ್ನ ಅಧ್ಯಕ್ಷ ಡಾ| ಎಂ. ಪಿ ಶ್ರೀನಾಥ ದೀಪ ಬೆಳಗಿಸಿ ಕಾರ್ಯಾಲಯವನ್ನು ಉದ್ಘಾಟಿಸಿ ಭಾರತೀ ಸಮೂಹ ಸಂಸ್ಥೆಯು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಶ್ರಯ ನೀಡಿದೆ. ಜಿಲ್ಲೆಯಲ್ಲಿ ಕನ್ನಡ ಮಾತೆ ಭುವನೇಶ್ವರಿಯ ಆರಾಧನೆಗೆ ಅನುವು ಮಾಡಿಕೊಟ್ಟ ಸಂಸ್ಥೆಗೆ ಕೃತಜ್ಞತರು. ಈ ಶಿಕ್ಷಣ ರಂಗದ ಆವರಣದಲ್ಲಿ ಜಿಲ್ಲೆಯ ಕನ್ನಡಿಗರ ಒಕ್ಕೊರಲ ದನಿ ಮೊಳಗಲಿ, ಎಲ್ಲರೂ ಒಂದಾಗಿ ಜಿಲ್ಲಾದ್ಯಂತ ಕನ್ನಡದ ತೇರನ್ನು ಎಳೆದು ಸಂಘಟಿತರಾಗೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತ್ ನ ಗೌರವ ಕಾರ್ಯದರ್ಶಿಗಳಾದ ವಿನಯ ಆಚಾರ್ಯ. ಎಚ್. ಮತ್ತು ರಾಜೇಶ್ವರಿ.ಎಂ, ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಸಂಘ ಸಂಸ್ಥೆಗಳ ಪ್ರತಿನಿಧಿ ಮೋಹನದಾಸ ಸೂರತ್ಕಲ್ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ನೂತನ ಕಾರ್ಯಾಲಯದಲ್ಲಿ ಜಿಲ್ಲಾ ಕ.ಸಾ.ಪ ಸಭೆ ನೆರವೇರಿತು.
