ಮುಂಬಯಿ :ಕನ್ನಡ ಕಲಾಕೇಂದ್ರ ಮುಂಬಯಿ ಹಾಗೂ ಮುಂಬಯಿ ಚುಕ್ಕಿ ಸಂಕುಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮವನ್ನು ಇದೇ ಫೆ.೨೬ನೇ ಶನಿವಾರದಂದು ಸಂಜೆ ೪.೩೦ ಗಂಟೆಗೆ ಭಾವುದಾಜಿ ರೋಡ್, ಮಾತುಂಗ ಇಲ್ಲಿರುವ ಮೈಸೂರು ಅಸೋಸಿಯೇಷನ್ನ ಕಿರು ಸಭಾಂಗಣದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಧಾನ ಪ್ರಬಂಧಕ ಎಂ.ವೆಂಕಟೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಕವಿ, ಅಂಕಣಕಾರ ಗೋಪಾಲ್ ತ್ರಾಸಿ ರಚಿತ ‘ಯುರೋಪ್ ಪ್ರವಾಸ ಕಥನ ಲಂಡನ್ ಟು ವ್ಯಾಟಿಕನ್ ಸಿಟಿ’ (ಎಂಟು ದೇಶ-ನೂರೆಂಟು ವಿಶೇಷ) ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿಕಾರ ಗೋಪಾಲ ತ್ರಾಸಿ ಉಪಸ್ಥಿತರಿದ್ದು, ಕೃತಿಕಾರರ ಜೊತೆ ನಡೆವ ಸಂವಾದದಲ್ಲಿ ಡಾ| ಜಿ.ಪಿ ಕುಸುಮಾ ಹಾಗೂ ಅಶೋಕ ವಳದೂರು ಭಾಗವಹಿಸಲಿದ್ದಾರೆ.
ಸಾಹಿತ್ಯ ಸಂಜೆ ಕಾರ್ಯಕ್ರಮದ ಅಂಗವಾಗಿ ಕವಿಸಮಯವು, ಹವ್ಯಕ ಸಂದೇಶದ ಸಂಪಾದಕರೂ ಆಗಿರುವ ಕವಿ (ನ್ಯಾಯವಾದಿ) ಅಮಿತಾ ಎಸ್.ಭಾಗವತ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಹಿರಿ-ಕಿರಿಯ ಕವಿವರ್ಯರಾದ ನಾರಾಯಣ ಶೆಟ್ಟಿ ನಂದಳಿಕೆ, ಅರುಷಾ ಎನ್.ಶೆಟ್ಟಿ, ಡಾ| ಜಿ.ಪಿ ಕುಸುಮಾ, ಅಶೋಕ್ ವಳದೂರು, ಡಾ| ವೈಶಾಲಿ ನಾಯಕ್, ಸರೋಜಾ ಶ್ರೀಕಾಂತ್ ಅಮಾತಿ, ಹೇಮಾ ಸದಾನಂದ ಅಮೀನ್, ವಿಠ್ಠಲ ಮನುರೆ, ಸವಿತಾ ಶೆಟ್ಟಿ, ಗಣೇಶ್ ಕುಮಾರ್, ಗೋಪಾಲ ತ್ರಾಸಿ, ಸಾ.ದಯಾ ಭಾಗವಹಿಸಲಿದ್ದಾರೆ.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಾಗಿ ಕನ್ನಡ ಕಲಾಕೇಂದ್ರ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ, ರಮೇಶ್ ಬಿರ್ತಿ ಹಾಗೂ ಮುಂಚುಸ ಇದರ ಸಂಚಾಲಕರು ವಿನಂತಿಸಿದ್ದಾರೆ.
ಕನ್ನಡ ಕಲಾಕೇಂದ್ರ ಮುಂಬಯಿ:
ಸಮಾನ ಮನಸ್ಕ ಕಲಾಪ್ರೇಮಿ, ನಾಡು-ನುಡಿಯ ಅಭಿಮಾನಿಗಳಿಂದ (೧೯೫೪) ಯಾವುದೇ ಪೂರ್ವ ಸಿದ್ಧತೆಗಳಿ ಲ್ಲದೆ ಹುಟ್ಟಿಕೊಂಡ ಸಂಸ್ಥೆ ಕನ್ನಡ ಕಲಾಕೇಂದ್ರ. ಬಹುಭಾಷಿಕ, ಬಹು ಸಂಸ್ಕೃತಿಯ ನೆಲೆ ಮುಂಬಯಿಯಲ್ಲಿ ಬಹುಭಾಷೆಯಲ್ಲಿ ನಾಟಕ ಉತ್ಸವ ನಡೆಯುತ್ತಿತ್ತು. ಆ ಸ್ಪರ್ಧೆಯಲ್ಲಿ ಮುಂದೆ ಕನ್ನಡ ನಾಟಕಗಳಿಗೆ ಪ್ರವೇಶ ಇಲ್ಲದಾದಾಗ, ಅದಕ್ಕೆ ಪ್ರತಿಭಟನೆ ರೂಪದಲ್ಲಿ ಕನ್ನಡ ಕಲಾಕೇಂದ್ರದ ಕನ್ನಡ ಮನಸುಗಳು ಕನ್ನಡ ನಾಟಕ ಉತ್ಸವ (೧೯೬೫) ಆಚರಿಸುವ ಬಹುಮುಖ್ಯವಾದ ಯೋಜನೆ ಕೈಗೊಂಡರು. ಆ ಮೂಲಕ ಕಳೆದ ೫೭ ವರ್ಷಗಳಲ್ಲಿ ಹಲವಾರು ಹೊಸ ನಿರ್ದೇಶಕರು, ನಾಟಕಕಾರರು, ಸಾವಿರಾರು ನಟರನ್ನು ರಂಗಕ್ಕೆ ತಂದ ಶ್ರೇಯ ಕೇಂದ್ರದ್ದು. ಆರ್ಥಿಕ ನಗರಿಯಲ್ಲಿ ನಾಟಕೋತ್ಸವ, ರಂಗೋತ್ಸವ, ನಾಟಕ ಶಿಬಿರ, ಯಕ್ಷಗಾನ ಶಿಬಿರಗಳನ್ನು ಮಾಡುತ್ತಾ ಕನ್ನಡ ರಂಗಭೂಮಿಯನ್ನು ಜೀವಂತವಿರಿಸುವ ಕ್ರಿಯೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡ ಸಂಸ್ಥೆ. ಮಕ್ಕಳಿಗೆ, ರಂಗಾಸಕ್ತರಿಗೆ ಶಿಬಿರಗಳನ್ನು ಏರ್ಪಡಿಸಿ ಮುಂಬೈಯಲ್ಲಿ ಕನ್ನಡ ರಂಗಭೂಮಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ. ಪ್ರಾರಂಭದಿAದಲೂ ರಂಗ ಚಟುವಟಿಕೆಗಳಲ್ಲದೆ ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲೂ ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳುತ್ತಾ ಬಂದಿದೆ.
ಮುಂಬಯಿ ಚುಕ್ಕಿ ಸಂಕುಲ: (ಲೇಖಕ ಕಲಾವಿದರ ಬಳಗ)
ಯಾವುದೇ ಘೋಷಣೆ ಗಳಿಲ್ಲದೆ ಅನೌಪಚಾರಿಕವಾಗಿ ಹುಟ್ಟಿಕೊಂಡ ಸಂಸ್ಥೆ ‘ಮುಂಚುಸ’. ಬರಹಗಾರರನ್ನು, ನಟರನ್ನು, ಚಿತ್ರ ಕಲಾವಿದರನ್ನು, ಪತ್ರಕರ್ತರನ್ನು, ಅಂಕಣ ಬರಹಗಾರರನ್ನು ಹೊಂದಿರುವ ‘ಮುಂಚುಸA’ ಈಗಾಗಲೇ ಹತ್ತು-ಹಲವು ನಾಟಕಗಳನ್ನು ರಂಗಕ್ಕೆ ತಂದಿದೆ. ಶಿಬಿರಗಳನ್ನು, ವಿಚಾರ ಗೋಷ್ಠಿಗಳನ್ನು, ಪ್ರಕಾಶನದ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಾ ಸಾರ್ಥಕ ಇಪ್ಪತ್ತೈದು ವಸಂತಗಳನ್ನು ಕಳೆದಿದೆ. ಈ ಎರಡೂ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿರುವ ಸಾಹಿತ್ಯಸಂಜೆ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ ಟಿ.ಆರ್ ವಹಿಸಲಿದ್ದಾರೆ.
ಗೋಪಾಲ ತ್ರಾಸಿ:
ಮುಂಬಯಿಯ ಯಾಂತ್ರಿಕ ಜೀವನದ ನಡುವೆ ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ ಆಗಿರುವ ಕವಿ, ಅಂಕಣಕಾರ, ಕತೆಗಾರ ಗೋಪಾಲ್ ತ್ರಾಸಿ ಅವರ ಕ್ರೀಯಾಶೀಲ ಚಟುವಟಿಕೆಗಳು ವೈವಿಧ್ಯಮಯ. ಈಗಾಗಲೇ ನೆಲದ ನಕ್ಷತ್ರಗಳು ಕವಿತಾ ಸಂಕಲನ ಮೊದಲ್ಗೊಂಡು ಆರು ಕೃತಿಗಳನ್ನು ಹಾಗೂ ಎರಡು ಸಂಪಾದಿತ ಕೃತಿಗಳನ್ನೂ ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಸಹೃದಯರ ಹಾಗೂ ವಿಮರ್ಶಕರ ಮೆಚ್ಚುಗೆಗೆ ತ್ರಾಸಿ ಪಾತ್ರರಾಗಿದ್ದಾರೆ. ಅವರ ಯುರೋಪ್ ಪ್ರವಾಸ ಕುರಿತು ಬರೆದ ಲಂಡನ್ ಟು ವ್ಯಾಟಿಕನ್ ಸಿಟಿ (ಎಂಟು ದೇಶ-ನೂರೆಂಟು ವಿಶೇಷ) ಎಂಬ ಪ್ರವಾಸ ಕಥನ ಕೃತಿಯನ್ನು ಮುಂಬಯಿ ಚುಕ್ಕಿ ಸಂಕುಲ (ಲೇಖಕ-ಕಲಾವಿದರ ಬಳಗ) ವು ಪ್ರಕಟಿಸಿದೆ.
