ಮುಂಬಯಿ : ವೃಂದಾ ಕೊನ್ನಾರು ಕಳೆದ ಡಿಸೆಂಬರ್ ನಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ್ದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಕರ್ನಾಟಕ ಕರಾವಳಿಯ ಮಂಗಳೂರು ಇಲ್ಲಿನ ಬೈಕಂಪಾಡಿ ನಿವಾಸಿಗಳಾದ ಬಿ. ಸುಬ್ಬ ರಾವ್ ಹಾಗೂ ವಿದ್ಯಾ ಎಸ್.ರಾವ್ ದಂಪತಿ ಸುಪುತ್ರಿ ವೃಂದಾ ಮಂಗಳೂರುನ ಸಿಎ| ಬಿ.ಸುದೇಶ್ ಕುಮಾರ್ ರೈ ಇವರಲ್ಲಿ ತರಬೇತಿ ಪಡೆದಿರುತ್ತಾರೆ. ಸುರತ್ಕಲ್ ಗೋವಿಂದಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಆಗಿದ್ದು, ಬಹುಮುಖ ಪ್ರತಿಭೆ ಆಗಿರುತ್ತಾರೆ. ಯಕ್ಷಗಾನ, ನಾಟಕ, ನಿರೂಪಣೆ, ಭಾಷಣ, ಕ್ರೀಡೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.
ಬಾಲ್ಯದಿಂದಲೇ ಕಲೆ-ಸಂಸ್ಕೃತಿಗಳತ್ತ ಆಕರ್ಷಿತಳಾಗಿದ್ದ ಈಕೆ, ತನ್ನ ಪ್ರಾಥಮಿಕ ತರಗತಿಗಳಿಂದಲೂ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವಳು. ತನ್ನ ಎರಡನೇ ತರಗತಿಯಲ್ಲೇ ಆರನೇ ಅಂರ್ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ೮ನೇ ಸ್ಥಾನ ಪಡೆದು, ಬಾಲ್ಯದಲ್ಲೇ ಸಾಧನೆಯ ಭರವಸೆ ಮೂಡಿಸಿದ ನಾರಿ. ಹಾಗೆಯೇ ೨೦೦೫ರಲ್ಲಿ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವಳು. ಇನ್ನು ಈಕೆಯ ಅಭಿರುಚಿ-ಹವ್ಯಾಸಗಳು ಒಂದೇ ಎರಡೇ….. ಚಿತ್ರಕಲೆ (ವೇಗದ ಚಿತ್ರಕಲೆ, ಮುಖವರ್ಣಿಕೆ, ಗ್ಲೋ ಆರ್ಟ್, ವರ್ಲಿ ಆರ್ಟ್, ಯಕ್ಷಗಾನ, ಭಾಷಣ, ನಿರೂಪಣೆ, ರಂಗಭೂಮಿ, ಛದ್ಮವೇಷ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ರಂಗೋಲಿ, ಏಕಪಾತ್ರಾಭಿನಯ, ಬೀದಿನಾಟಕ, ಸೃಜನಾತ್ಮಕ ಬರವಣಿಗೆ (ಪ್ರಬಂಧ ಹಾಗೂ ಕವನಗಳು), ಪೇಪರ್ ಪ್ರೆಸೆಂಟೇಷನ್, ಚರ್ಚೆ, ಪಿಕ್ & ಸ್ಪೀಕ್, ರಸಪ್ರಶ್ನೆ , ಜಾನಪದ ನೃತ್ಯ , ಯೋಗ ಇನ್ನೂ ಅನೇಕ. ಇದಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಸಹ ತನ್ನ ಇರವನ್ನು ಬಿಟ್ಟುಕೊಡದ ಈಕೆ, ಕಬಡ್ಡಿ, ಹೈ ಜಂಪ್ ಕ್ರೀಡೆಗಳಲ್ಲೂ ಕೂಡ ಭಾಗವಹಿಸಿ (ಶಾಲಾ ದಿನಗಳಲ್ಲಿ ಜಿಲ್ಲಾ ಹಾಗೂ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
೨೦೧೩ನೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೯೮.೨೪% ಅಂಕ ಪಡೆದು, ರಾಜ್ಯಕ್ಕೆ ೯ನೇ ಸ್ಥಾನ ಪಡೆದ ೨೦೧೫ನೇ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.೯೮.೧೭% ಅಂಕಗಳೊಂದಿಗೆ ರಾಜ್ಯಕ್ಕೆ ೫ನೇ ಸ್ಥಾನ ಗಳಿಸಿದ್ದಲ್ಲದೆ, ಸಿಎ-ಸಿಪಿಟಿ ಹಾಗೂ ಸಿಎ-ಐಪಿಸಿಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ ಆಗುವುದರೊಂದಿಗೆ, ಪದವಿ ಶಿಕ್ಷಣ (ಬಿ.ಕಾಂ ಪದವಿ), ೯೪.೮೪% ಅಂಕದೊಂದಿಗೆ ಪೂರೈಸಿ, ವಿಶ್ವವಿದ್ಯಾಲಯಕ್ಕೆ ಎರಡನೇ ರ್ಯಾಂಕ್ ಪಡೆದದ್ದು ಈಕೆಯ ಶೈಕ್ಷಣಿಕ ಸಾಧನೆಗೆ ಮುಕುಟಪ್ರಾಯ. ಜಲವರ್ಣ, ತೈಲವರ್ಣ, ಅಕ್ರಿಲಿಕ್ ಪೆನ್ಸಿಲ್ ಸ್ಕೆಚ್ ,ಚಾರ್ ಕೋಲ್ ,ಪೆನ್ ಡ್ರಾಯಿಂಗ್ ,ಪೋರ್ಟೇ ಟ್ ಇತ್ಯಾದಿಗಳಲ್ಲಿ ಪರಿಣತಿ ಹೊಂದಿದ್ದಾರೆ.
ಯಕ್ಷಕಲೆಯನ್ನು ತನ್ನ ದೇವರಂತೆ ಪೂಜಿಸುವ ಈಕೆ ಕನ್ನಡ, ಇಂಗ್ಲಿಷ್, ತುಳು ಹಾಗೂ ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದು, ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆಯನ್ನೂ ನಿರ್ವಹಿಸಿ ಸೈಎನಿಸಿ ಕೊಂಡಿದ್ದಾರೆ. ಆಕಾಶವಾಣಿಯಲ್ಲಿ ಕೂಡ ಹಲವು ಕಾರ್ಯಕ್ರಮಗಳನ್ನು ನೀಡಿದ್ದು ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತಂಡ ಪ್ರಶಸ್ತಿಗೆ ಕಾರಣರಾಗಿದ್ದಾರೆೆ. ಈಕೆಯ ಶ್ರೀ ಕೃಷ್ಣನ ಪಾತ್ರಕ್ಕೆ ವೈಯಕ್ತಿಕ ಬಹುಮಾನ ಪಡೆದಿದ್ದು ಪಣಂಬೂರು ಮಕ್ಕಳ ಮೇಳ, ಶಾರದಾ ಯಕ್ಷ ಕಲಾ ಕೇಂದ್ರ ಉರ್ವಸ್ಟೋರ್, ಸನಾತನ ಯಕ್ಷಾಲಯ ಮಂಗಳೂರು, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಸಂಘ ಬಾಳ, ಯಕ್ಷಾರಾಧನ ಕಲಾಕೇಂದ್ರ ಉರ್ವಸ್ಟೋರ್ ಮುಂತಾದ ಕಡೆಗಳಲ್ಲಿ ವೇಷ ನಿರ್ವಹಿಸಿದ್ದಾಳೆ. ಭಾಷಣ -ಆಶುಭಾಷಣ- ನಿರೂಪಕಿ ಇತ್ಯಾದಿ ಬಹುಮುಖ ಪ್ರತಿಭೆಯಿಂದ ತುಳುನಾಡಿನ ಒಡಲಲ್ಲಿ ಇಂತಹ ಒಬ್ಬ ಮಹಾನ್ ಸಾಧಕಿ ಆಗುವ ಭರವಸೆಯಿತ್ತ ಈಕೆ ಮತ್ತೊಮ್ಮೆ ವೃತ್ತಿ ಸಾಧನೆಗೈದಿದ್ದಾರೆ. ಆಕೆಯ ಕೀರ್ತಿಶಿಖರ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಎಂದು ಈಕೆಯ ಸಂಬಂಧಿ ತೋನ್ಸೆ ಬಿ.ರಮಾನಂದ ರಾವ್ (ಕಲೀನಾ, ಮುಂಬಯಿ) ಮನತುಂಬಿ ಹಾರೈಸಿದ್ದಾರೆ.
