ಕೈಕಂಬ: ಮೇಳದ ಯಜಮಾನರೆಂದೇ ಗೌರವಿಸಲ್ಪಡುತ್ತಿದ್ದ ಇರಾ ಕಲ್ಲಾಡಿ ವಿಠಲ ಶೆಟ್ಟಿ ಅವರ 16ನೇ ಸಂಸ್ಮರಣಾ ಕಾರ್ಯಕ್ರಮ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ವತಿಯಿಂದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ವೇಣುಗೋಪಾಲ ಭಂಡಾರಿ ಬಾವಬೀಡು, ಟ್ರಸ್ಟ್ ನ ಗೌರವಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಟ್ರಸ್ಟ್ ನ ಅಧ್ಯಕ್ಷ ಜಯರಾಮ್ ಪೂಜಾರಿ, ಕಾರ್ಯದರ್ಶಿ ಗಣೇಶ್ ಕೊಟ್ಟಾರಿ, ಸೇವಾ ಸಮಿತಿ ಅಧ್ಯಕ್ಷ ಜಯರಾಜ್ ಶೆಟ್ಟಿ, ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ ಇರಾಗುತ್ತು, ಸುರೇಶ್ ಕೊಟ್ಟಾರಿ ಇರಾ, ಚಂದ್ರಹಾಸ್ ಶೆಟ್ಟಿ ಬಾಲಾಜಿಬೈಲು, ಯತಿರಾಜ್ ಶೆಟ್ಟಿ ಹಾಗೂ ವೈ. ಬಿ. ಸುಂದರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಹಿರಿಯ ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಅವರನ್ನು ಸನ್ಮಾನಿಸಿ ಸಹಾಯಧನ ವಿತರಿಸಲಾಯಿತು.
ಇದೇ ಸಂದರ್ಭ ಕಟೀಲು ಮತ್ತು ಕರ್ನಾಟಕ ಮೇಳಗಳಲ್ಲಿ ಸಹಾಯಕರಾಗಿ ದುಡಿಯುತ್ತಿದ್ದ ಐದು ಮಂದಿ ನೇಪಥ್ಯ ಕಲಾವಿದರಿಗೆ ಆರ್ಥಿಕ ಸಹಾಯ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಮನರಂಜನೆ ಪ್ರಯುಕ್ತ ತೆಂಕುತಿಟ್ಟಿನ ಖ್ಯಾತ ಕಲಾವಿದರಿಂದ “ಸತ್ಯ ಹರಿಶ್ಚಂದ್ರ* ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಟ್ರಸ್ಟ್ ನ ಕೋಶಾಧಿಕಾರಿ ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
