ಮೂಡುಬಿದಿರೆ: ಇರುವೈಲು ಮತ್ತು ಕಿಲೆಂಜಾರು ಗ್ರಾಮದ ಗಡಿ ಪ್ರದೇಶ ಕೊಲ್ಲಾಯ್ ಕೊಡಿ ಎಂಬಲ್ಲಿ ಹಂದಿಗೆ ಇಟ್ಟಿದ್ದ ಉರುಳಿಗೆ ಸಿಲುಕಿದ ಚಿರತೆಯೊಂದನ್ನು ಅರಣ್ಯ ಇಲಾಖೆ ಮತ್ತು ಪೊಲೀಸರು ಸತತ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಕೊಲ್ಲಾಯ್ ಕೊಡಿ ಎಂಬಲ್ಲಿ ಪಲ್ಗುಣಿ ನದಿಯ ಸಮೀಪ ಶನಿವಾರ ಬ ಚಿರತೆಯೊಂದು ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಮೂಡುಬಿದಿರೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ವೈದ್ಯಕೀಯ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಮತ್ತು ಪೊಲೀಸರು ಪೊದೆಯೊಳಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಮಾಡಿದ ಮೊದಲ ಪ್ರಯತ್ನ ವಿಫಲವಾಯಿತು. ನಂತರ ಎರಡನೇ ಬಾರಿ ಪೊದೆಯೊಳಗಿದ್ದ ಚಿರತೆಯ ಮೇಲೆ ಬಲೆಯನ್ನು ಹಾಕಿ ಎರಡನೇ ಬಾರಿ ಚುಚ್ಚುಮದ್ದು ನೀಡುವ ಪ್ರಯತ್ನದಲ್ಲಿ ವೈದ್ಯರು ಯಶಸ್ವಿಯಾದರು.
ಗಿಡಗಂಟಿಗಳ ನಡುವೆ ಅಲ್ಯೂಮಿನಿಯಂ ತಂತಿಯಿಂದ ಮಾಡಲ್ಪಟ್ಟಿರುವ ಉರುಳಿನಲ್ಲಿ ಸಿಲುಕಿದ್ದ ಚಿರತೆಯನ್ನು ಯಾವುದೇ ಅಪಾಯವಿಲ್ಲದಂತೆ ಬಿಡಿಸಿ ಬೋನಿಗೆ ಸ್ಥಳಾಂತರಿಸಿ ಮೂಡುಬಿದಿರೆ ಸಾಗಿಸಲಾಯಿತು.
ಮೂಡುಬಿದಿರೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಹಿಮಗಿರಿ ಅಂಗಡಿ, ಸತೀಶ್ ಸಿಬ್ಬಂದಿಗಳಾದ ಅಶ್ವಿತ್, ಡಾ, ಯಶಸ್ವಿ ನಾರಾವಿ, ಡಾ, ಪ್ರಥ್ವಿ, ಮೂಡುಬಿದಿರೆ ಪೊಲೀಸ್ ಠಾಣೆಯ ಎಎಸ್ಐ ಕಾಂತಪ್ಪ, ಸಿಬ್ಬಂದಿಗಳಾದ ರಾಮು, ಜಾಹೀದ್, ಮಾಧವ, ಪ್ರಶಾಂತ್, ರಮೇಶ್ ಕಾರ್ಯಾಚರಣೆಯಲ್ಲಿದ್ದರು.
