ಬಂಟ್ವಾಳ : ತಾಲ್ಲೂಕಿನ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ‘ಏಕಶಿಲಾ ಮಾನಸ್ಥಂಭ’ ಮೆರವಣಿಗೆ ಸೋಮವಾರ ನಡೆಯಿತು. ಸುದರ್ಶನ್ ಜೈನ್, ರಾಜವೀರ ಇಂದ್ರ ಬಳ್ಳಮಂಜ ಮತ್ತಿತರರು ಇದ್ದಾರೆ.
ಬಂಟ್ವಾಳ ಪಂಜಿಕಲ್ಲು ಎಂಬಲ್ಲಿ ರೂ ೨.೫ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ರೂ ೧೨ ಲಕ್ಷ ವೆಚ್ಚದಲ್ಲಿ ಅಳವಡಿಸಲಾಗುತ್ತಿರುವ ‘ಏಕಶಿಲಾ ಮಾನಸ್ಥಂಭ’ವು ದೊಡ್ಡಬಳ್ಳಾಪುರದಿಂದ ಸೋಮವಾರ ಆಗಮಿಸಿದೆ. ಪಂಜಿಕಲ್ಲುಪoದವು ಎಂಬಲ್ಲಿ ಸೋಮವಾರ ಅದ್ದೂರಿ ಸ್ವಾಗತ ನೀಡಿದ ಬಳಿಕ ಆಕರ್ಷಕ ಮೆರವಣಿಗೆಯಲ್ಲಿ ಬಸದಿಗೆ ಮಾನಸ್ಥಂಭ ಕರೆ ತರಲಾಯಿತು. ನಿವೃತ್ತ ಪ್ರಾಂಶುಪಾಲ ರಾಜವೀರ ಇಂದ್ರ ಬಳ್ಳಮಂಜ ಮೆರವಣಿಗೆಗೆ ಚಾಲನೆ ನೀಡಿದರು. ಶ್ರಾವಕರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಪಂಜಿಕಲ್ಲು ಬಸದಿ ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಮುಂಬರುವ ಫೆಬ್ರವರಿ ತಿಂಗಳು ಬಸದಿ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಪಂಚಕಲ್ಯಾಣೋತ್ಸವ ನಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು ೧೬ ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ ೩೨ ಅಡಿ ಎತ್ತರದ ಏಕಶಿಲಾ ಮಾನಸ್ಥಂಭ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ರಾಷ್ಟ್ರೀಯ ಜೈನ್ ಮಿಲನ್ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಬಸದಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಆಡಳಿತ ಸಮಿತಿ ಕಾರ್ಯದರ್ಶಿ ದೇವ ಕುಮಾರ್ ಇಂದ್ರ, ಪ್ರಮುಖರಾದ ನಿರಂಜನ್ ಜೈನ್ ಅಂತರ, ಸತೀಶ ಕುಮಾರ್ ಅಗರಿ, ಹರ್ಷೇಂದ್ರ ಜೈನ್ ಅಂತರ, ಚಂದ್ರಶೇಖರ ಇಂದ್ರ, ರತ್ನವರ್ಮ ಇಂದ್ರ, ಸುಭಾಶ್ಚಂದ್ರ ಜೈನ್ ಬಂಟ್ವಾಳ, ರಾಜೇಶ ಜೈನ್ ಪಡ್ರಾಯಿ, ಕೃಷ್ಣರಾಜ್ ಜೈನ್, ಜಿನಚಂದ್ರ ಜೈನ್, ಡಾ.ಶ್ರೀಮಂದರ ಜೈನ್, ಪದ್ಮಸ್ಮಿತ್ ಜೈನ್ ಹಿರ್ಣಿ, ಜಿತೇಂದ್ರ ಜೈನ್, ಮಹಾವೀರ ಜೈನ್ ಸಿದ್ಧಕಟ್ಟೆ, ವಿದ್ಯಾ ಕುಮಾರ್ ಇಂದ್ರ, ಮಧ್ವರಾಜ್ ಜೈನ್ ಸಿದ್ಧಕಟ್ಟೆ, ಪಾಂಡಿರಾಜ್ ಜೈನ್ ಪುಚ್ಚೇರು ಸಹಿತ ಸ್ಥಳೀಯ ನಾಗರಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
