ಕೈಕಂಬ : ಗುರುಪುರ ಪಂಚಾಯತ್ನ ಸಭಾಭವನದಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಅಧಿಕಾರಿಗಳ ತಂಡವು ಮಂಗಳವಾರ ಮಂಗಳೂರು-ಮೂಡಬಿದ್ರಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ೧೬೯ರ ವಿಸ್ತರಣೆ ಕಾಮಗಾರಿಗಾಗಿ ಈಗಾಗಲೇ ಭೂಸ್ವಾಧೀನ ಪಡಿಸಲಾಗಿರುವ ಭೂಮಿಗೆ ಅಧಿಕೃತ ಪರಿಹಾರ ನೀಡುವ ಉದ್ದೇಶದಿಂದ ಭೂಮಿ ಕಳಕೊಂಡವರ ಭೂ ವಿವರ, ಭೂ ಮಾಲಕರು, ಹಕ್ಕುದಾರರ ಮಾಹಿತಿ ಹಾಗೂ ಕಾನೂನು ರೀತ್ಯಾ ಕೈಗೊಂಡಿರುವ ಕ್ರಮಗಳ ದಾಖಲೆ ಪತ್ರ ಭರ್ತಿ ಮಾಡಲಾಗಿ ಅರ್ಜಿ ಫಾರಂ ಸ್ವೀಕರಿಸಿತು.
ಈ ಸಂದರ್ಭದಲ್ಲಿ ಹೆದ್ದಾರಿ ವಿಸ್ತರಣೆಗಾಗಿ ಭೂಮಿ ಕಳೆದುಕೊಂಡಿರುವ ಗುರುಪುರ ಹೋಬಳಿಯ ಭೂಮಾಲಕರು ತಮ್ಮಲ್ಲಿರುವ ಭೂ ದಾಖಲೆಗಳೊಂದಿಗೆ ಭರ್ತಿ ಮಾಡಲಾದ ಅರ್ಜಿ ಫಾರಂನ್ನು ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ರಮ ಪ್ರಾಧಿಕಾರ ಎನ್ಎಚ್ಎಐ ಅಧಿಕಾರಿ ತಂಡದ ಸರ್ವೇ ಅಧಿಕಾರಿ ಭಾಸ್ಕರ್ ಪಿ ಅವರಿಗೆ ನೀಡಿದರು. ತಂಡದೊಂದಿಗೆ ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯರಾದ ಜಿ ಎಂ ಉದಯ ಭಟ್, ಗ್ರಾಮ ಲೆಕ್ಕಾಧಿಕಾರಿ(ವಿಎ) ಮುತ್ತಪ್ಪ ಬಡಿಗೇರ ಮತ್ತಿತತರು ಉಪಸ್ಥಿತರಿದ್ದರು.
ಗುರುಪುರ, ಕಂದಾವರ, ಬಡಗ ಎಡಪದವು ಮತ್ತು ಕುಡುಪು ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳವಾರ ಏಕಕಾಲಕ್ಕೆ ಹೆದ್ದಾರಿ ಪ್ರಾಧಿಕಾರದ ತಂಡವು ಭೂ ಮಾಲಕರಿಂದ ಭೂ ದಾಖಲೆ ದೃಢೀಕೃತ ದಾಖಲೆ ಪತ್ರ ಭರ್ತಿ ಮಾಡಲಾದ ಅರ್ಜಿ ಫಾರಂ ಸ್ವೀಕರಿಸಿತು.
ಪರಿಹಾರ ಮೊತ್ತದಲ್ಲಿ ಕೃಷಿಕರಿಗೆ ಅನ್ಯಾಯ : ಹೆದ್ದಾರಿ ಸಂಖ್ಯೆ ೧೬೯ರ ವಿಸ್ತರಣೆ ವಿಷಯದಲ್ಲಿ ೨೦೧೭ರಲ್ಲಿ ಎನ್ಎಚ್ಎಐ ಮಾಧ್ಯಮಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಭೂ ಪರಿವರ್ತನೆಗೊಳಪಟ್ಟ ಜಮೀನು ಹಾಗೂ ಕೃಷಿ ಭೂಮಿಗೆ ಪರಿಹಾರ ಮೊತ್ತ ನಿಗದಿಪಡಿಸಿಲ್ಲ. ಭೂಮಿ ಕಳಕೊಂಡವರ ಪಟ್ಟಿಗೆ ಮಾತ್ರ ಸುತ್ತೋಲೆ ಸೀಮಿತವಾಗಿತ್ತು. ಎನ್ಎಚ್ಎಐ ೨೦೨೦ರಲ್ಲಿ ಹೊರಡಿಸಿರುವ ಮತ್ತೊಂದು ಸುತ್ತೋಲೆಯಲ್ಲಿ ಪರಿಹಾರ ಮೊತ್ತದ ಮಾಹಿತಿ ನೀಡಿತ್ತು. ಇದರಲ್ಲಿ ಪರಿವರ್ತನೆಗೊಂಡ ಭೂಮಿ, ತರಿ, ಭಾಗಾಯ್ತು ಮತ್ತು ಕುಷ್ಕಿ ಭೂಮಿಗೆ ನಿರ್ದಿಷ್ಟ ಪರಿಹಾರ ಮೊತ್ತ ನಮೂದಿಸಲಾಗಿತ್ತು. ಆಶ್ಚರ್ಯಕರ ಸಂಗತಿಯೆಂದರೆ, ೨೦೧೭ ಮತ್ತು ೨೦೨೦ ಮಧ್ಯದ ಅವಧಿಯಲ್ಲಿ ಸಾಕಷ್ಟು ಮಂದಿ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಮಾಡಿಕೊಂಡಿದ್ದು, ಸದ್ಯ ಆ ಭೂ ಮಾಲಕರಿಗೆ ಮಾತ್ರ ದೊಡ್ಡ ಮೊತ್ತದ ಪರಿಹಾರ ಲಭಿಸಲಿದ್ದರೂ, ಕೃಷಿ ಭೂ ಮಾಲಕರಿಗೆ ಚಿಕ್ಕಾಸು ಸಿಗಲಿದೆ. ‘ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರ ರೈತರಿಗೆ ಮಾಡಿದೆ ಮೋಸ’ ಎಂದು ಕೃಷಿ ಭೂಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗುರುಪುರ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿ ವಿಸ್ತರಣೆಗೆ ಬಹುತೇಕ ಕೃಷಿಭೂಮಿ ಗುರುತಿಸಲ್ಪಟ್ಟಿದೆ. ಹೆದ್ದಾರಿ ಪ್ರಾಧಿಕಾರವು ಪರಿಹಾರ ಮೊತ್ತ ನಿಗದಿಪಡಿಸುವಾಗ ಸಭೆ ನಡೆಸಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಮನಬಂದಂತೆ ಗಡಿ ಗುರುತು ಮಾಡಿದ್ದಾರೆ. ಒಂದೊಂದು ಗ್ರಾಮದಲ್ಲಿ ತರಾವರಿ ಮೊತ್ತ ನಿಗದಿಪಡಿಸಲಾಗಿದೆ. ಇದರಿಂದ ಕೃಷಿ ಭೂಮಿ ಕಳೆದುಕೊಂಡಿರುವ ರೈತರಿಗೆ ಅನ್ಯಾಯವಾಗಿದೆ. ಭೂ ಪರಿವರ್ತನೆಗೊಂಡ ಭೂ ಮಾಲಕರಿಗೆ ನೀಡುವಷ್ಟೇ ಪರಿಹಾರ ಕೃಷಿ ಭೂ ಭೂಮಾಲಕರಿಗೂ ನೀಡಬೇಕು” ಎಂದು ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಹೇಳಿದರು.
‘ರೈತರ ಒಂದು ಎಕ್ರೆ ಭೂಮಿಗೆ ೩೦ ಲಕ್ಷ ರೂ ಹಾಗೂ ಭೂ ಪರಿವರ್ತನೆಗೊಂಡವರ ಒಂದು ಎಕ್ರೆ ಜಮೀನಿಗೆ ೨.೫೦ ಕೋಟಿ ರೂ ನಿಗದಿಪಡಿಸಲಾಗಿದೆ. ಈ ವಿಷಯ ಬಲ್ಲ ಕೆಲವು ಜಮೀನುದಾರರು ಮೂರು ವರ್ಷದ ಅವಧಿಯಲ್ಲಿ(ಎರಡನೇ ಸುತ್ತೋಲೆ ಬಿಡುಗಡೆಯೊಳಗೆ) ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ. ಇಂತಹ ಜಮೀನಿಗೆ ಹೆಚ್ಚು ಪರಿಹಾರ ಲಭ್ಯವಾಗಲಿದೆ. ಪರಿವರ್ತನೆಯಾಗದ ತರಿ/ಭಾಗಾಯ್ತು/ಕುಷ್ಕಿ ಜಾಗಕ್ಕೆ ಮೂರು ರೀತಿಯ ರೇಟ್ ಫಿಕ್ಸ್ ಮಾಡಿದ್ದಾರೆ. ಕೃಷಿ ಭೂ ಮಾಲಕರಿಗೂ ಭೂಪರಿವರ್ತನೆ ಭೂ ಮಾಲಕರಿಗೆ ನೀಡುವಷ್ಟೇ ಪರಿಹಾರ ಮೊತ್ತ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಉದ್ಭವಿಸಬಹುದಾದ ಕಾನೂನಾತ್ಮಕ ಸಮಸ್ಯೆಗೆ ಪ್ರಾಧಿಕಾರವೇ ಹೊಣೆಯಾಗುತ್ತದೆ” ಎಂದು ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಜಿ ಎಂ ಉದಯ ಭಟ್ ತಿಳಿಸಿದರು.
ಪರಿಹಾರ ಮೊತ್ತದ ವಿಷಯದಲ್ಲಿ ತಕರಾರುಗಳೇನಾದರೂ ಇದ್ದಲ್ಲಿ, ಹೆದ್ದಾರಿ ಪ್ರಾಧಿಕಾರ ಕಚೇರಿಗೆ ದೂರಿಕೊಳ್ಳಬಹುದೆಂದು ಭೂ ಮಾಲಕರಿಗೆ ಭಾಸ್ಕರ್ ಸೂಚಿಸಿದರು.
