ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ಅಣ್ಣನೇ ತಮ್ಮನನ್ನು ತಲೆಗೆ ದೊಣ್ಣೆಯಿಂದ ಬಡಿದು ಹತ್ಯೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಆರೋಪಿ ರವಿ ನಾಯ್ಕ್ ಎಂಬಾತನನ್ನು ನಗರ ಠಾಣೆ ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಇಲ್ಲಿನ ಶಾಂತಿಗುಡ್ಡೆ ಹಳೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಮೃತ ಸುಂದರ ನಾಯ್ಕನಿಗೆ ಪಕ್ಕದದಲ್ಲೇ ಮನೆ ಹೊಂದಿರುವ ಸಹೋದರ ರವಿ ನಾಯ್ಕ್ ಇವರ ಪತ್ನಿ ಜಯಂತಿ ಪ್ರತಿ ದಿನ ಊಟ -ತಿಂಡಿ ಒದಗಿಸುತ್ತಿದ್ದರು. ಇವರಿಬ್ಬರ ನಡುವೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಸುಂದರ ಮತ್ತು ಅಣ್ಣ ರವಿ ನಾಯ್ಕ್ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಶುಕ್ರವಾರ ತಡರಾತ್ರಿ ಸುಮಾರು ೧೧.೩೦ ಗಂಟೆಗೆ ಹಳೆ ಮನೆಯಲ್ಲಿ ಸುಂದರನ ತಲೆಗೆ ಅಡಿಕೆ ಸಲಾಕೆಯಿಂದ ಹೊಡೆದು ರವಿ ನಾಯ್ಕ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇವರ ಬೊಬ್ಬೆ ಕೇಳಿ ಕಿರಿಯ ಸಹೋದರ ರಮೇಶ ಮತ್ತಿತರರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಸುಂದರ ನಾಯ್ಕ್ ಕೋಮು ಗಲಭೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
