ಮೂಡುಬಿದಿರೆ: ಶ್ರೀ ಕ್ಷೇತ್ರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಹರಿಕೆ ಸೇವಾ ಚಿಕ್ಕಮೇಳವು 2019ರಲ್ಲಿ 30ನೇ ವರ್ಷದ ಮಳೆಗಾಲದ ತಿರುಗಾಟವನ್ನು ಪೂರೈಸಿದ್ದು ಕೊರೊನ-19 ಕಾರಣದಿಂದಾಗಿ 2020 ಮತ್ತು 2021ರಲ್ಲಿ ಮನೆಮನೆಗಳಲ್ಲಿ ಯಕ್ಷಗಾನ ಸೇವೆ ನಡೆಸಲಾಗಿಲ್ಲ. ಚಿಕ್ಕಮೇಳದ ಸಂಪ್ರದಾಯದಂತೆ ಈ ಎರಡೂ ವರ್ಷಗಳಲ್ಲಿ ಕ್ಷೇತ್ರ ಪುತ್ತಿಗೆಯಲ್ಲಿ ಪತ್ತನಾಜೆಯಂದು ಪ್ರಾರಂಭದ ಸೇವೆ ಮತ್ತು ದೀಪಾವಳಿ ಅಮವಾಸ್ಯೆಯಂದು ಕೊನೆಯ ಸೇವೆ ಆಟ ನಡೆಸುವ ಕ್ರಮಕ್ಕೆ ಮೇಳದ ಚಟುವಟಿಕೆಗಳನ್ನು ಸೀಮಿತಗೊಳಿಸಲಾಗಿದೆ.
ಈ ನಡುವೆ ಪುತ್ತಿಗೆ ಚಿಕ್ಕಮೇಳದ ತಿರುಗಾಟದ ಬಗ್ಗೆ ಭಕ್ತಾದಿಗಳು, ಯಕ್ಷಗಾನ ಕಲಾಭಿಮಾನಿಗಳು ಕಾಳಜಿಯಿಂದ ವಿಚಾರಿಸುತ್ತಿರುವುದನ್ನು ಲಕ್ಷಿಸಿ, ‘ಮುಂದಿನ ವರ್ಷಗಳಲ್ಲಿ ಕೊರೊನ ಮುಕ್ತ ವಾತಾವರಣ ನಿರ್ಮಾಣವಾಗಿ ಮತ್ತೆ ಮೂಡುಬಿದಿರೆ ಮತ್ತು ಕಾರ್ಕಳ ಪರಿಸರದಲ್ಲಿ ಚಿಕ್ಕಮೇಳದ ಹರಿಕೆ ಸೇವಾ ಯಕ್ಷಗಾನ ಪ್ರದರ್ಶನ ನಡೆಸುವ ನಿರೀಕ್ಷೆಯೊಂದಿಗೆ ಅಭಿಮಾನಿಗಳ ಸಹಕಾರವನ್ನು ಮೇಳವು ಕೋರುತ್ತಿದೆ’ ಎಂದು ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆ ಕುಲದೀಪ ಎಂ. ಮತ್ತು ಚಿಕ್ಕ ಮೇಳದ ಭಾಗವತ, ಸಂಚಾಲಕ ಸುರೇಂದ್ರ ಪೈ ಸಂಪಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
