ಮೂಡುಬಿದಿರೆ: ಮೂಲಭೂತ ಸೌಕರ್ಯ, ಮಕ್ಕಳಿಲ್ಲದೆ ಕಳೆದ 25 ವರ್ಷಗಳ ಹಿಂದೆ ಮುಚ್ಚಿದ್ದ ಶಾಲೆಯನ್ನು ಮರು ತೆರೆಯುವಂತೆ ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಡೆಕ್ಕಲ್ನ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಅಂದು ಡೆಕ್ಕಲ್ ಪ್ರದೇಶದಲ್ಲಿ ಯಾವುದೇ ಮನೆಗಳಿಲ್ಲದ ಪ್ರದೇಶದಲ್ಲಿ ಶಾಲೆ ತೆರೆಯಲಾಗಿತ್ತು. ಆ ಬಳಿಕ ವಿದ್ಯಾರ್ಥಿಗಳಿಲ್ಲದ ಕಾರಣ ಶಾಲೆಯನ್ನು ಮುಚ್ಚಲಾಗಿತ್ತು. ಇದೀಗ ಆ ಪ್ರದೇಶದಲ್ಲಿದ್ದ ಮನೆಗಳು ನಿರ್ಮಾಣಗೊಂಡಿದ್ದು ಮಕ್ಕಳು ಕೂಡಾ ಇದ್ದಾರೆ. ಆದರೆ ಆ ಮಕ್ಕಳು ಅಂಗನವಾಡಿ ಅಥವಾ ಪ್ರಾಥಮಿಕ ಶಾಲೆಗೆ ಹೋಗಬೇಕಾದರೆ ಸುತ್ತುವರೆದು ದೂರದಲ್ಲಿರುವ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷೆ ಕಲ್ಯಾಣಿ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಿದ್ದು, ಶಾಲೆಯನ್ನು ಪ್ರಾರಂಭಿಸುವುದೆಂದು ತೀರ್ಮಾನವನ್ನು ಕೈಗೊಳ್ಳಲಾಯಿತು.
ಹಿಂದೆ ಕಿರಿಯ ಪ್ರಾಥಮಿಕ ಶಾಲೆಯಿದ್ದು ಇದೀಗ ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕಟ್ಟಡವಿರುವ ಜಾಗದಲ್ಲಿ ಮೊದಲಿಗೆ ಅಂಗನವಾಡಿ ಕೇಂದ್ರವನ್ನು ತೆರೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಂದಿನ ಸಾಲಿನಲ್ಲಿ ಒಂದನೇ ತರಗತಿಯನ್ನು ತೆರೆಯುವುದೆಂದು ತೀರ್ಮಾನಿಸಲಾಯಿತು.
