ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ 40 ಮುದ್ರಣಾಲಯಗಳಿದ್ದು 200 ಕಾರ್ಮಿಕ ಕುಟುಂಬಗಳಿವೆ ಹಾಗೂ ಮೂಲಗಳ ಪ್ರಕಾರ ರಾಜ್ಯದಲ್ಲಿ 15000 ಮುದ್ರಣಾಲಯಗಳಿದ್ದು ಸುಮಾರು 1 ಲಕ್ಷ ಕಾರ್ಮಿಕರು ಮುದ್ರಣ ವಲಯವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ವ್ಯಾಪಕ ಕೋವಿಡ್-19 ಹಾವಳಿಯಿಂದ ಮುದ್ರಣ ವಲಯವು ಚೇತರಿಸಿಕೊಳ್ಳಲಾರದಷ್ಟು ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ.
ಸರಕಾರ ಈಗಾಗಲೇ ಗುರುತಿಸಿರುವ 40 ಅಸಂಘಟಿತ ವಲಯಗಳಲ್ಲಿ ಮುದ್ರಣ ವಲಯವನ್ನು ಸೇರಿಸಿದ್ದರೂ ಕಟ್ಟಡ ಕಾರ್ಮಿಕರಿಗೆ ಸಿಗುವ ಯಾವ ಸೌಲಭ್ಯಗಳೂ ಮದ್ರಣ ವಲಯದ ಕಾರ್ಮಿಕರಿಗೆ ಸಿಗುತ್ತಿಲ್ಲ. ಸರಕಾರದಿಂದ ಮುದ್ರಣ ಕಾರ್ಮಿಕರಿಗೆ ಯಾವುದೇ ಕೊರೊನಾ ಪ್ಯಾಕೆಜನ್ನೂ ಘೋಷಣೆ ಮಾಡಿಲ್ಲ. ಆದುದರಿಂದ ಈ ತಾರತಮ್ಯವನ್ನು ಸರಿಪಡಿಸಲು ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಂಟ್ವಾಳ ಕ್ಷೇತ್ರ ಶಾಸಕ ಯು. ರಾಜೇಶ್ ನಾಯಕ್ ಅವರಿಗೆ ಬಂಟ್ವಾಳ ತಾಲೂಕು ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮನವಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಮಾನ್ಯ ಸಂಸದರು ಹಾಗೂ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ಪ್ರಕಟಿಸುವುದಾಗಿ ಭರವಸೆಯನ್ನಿತ್ತರು. ಈ ಸಂದರ್ಭ ಬಂಟ್ವಾಳ ಪ್ರಿಂಟರ್ಸ್ ಎಸೋಸಿಯೇಶನಿನ ಅಧ್ಯಕ್ಷ ವಿದ್ಯಾಧರ್, ಉಪಾದ್ಯಕ್ಷ ಹರೀಶ್ ಬಂಗೇರ, ನಿಕಟಪೂರ್ವಾಧ್ಯಕ್ಷ ಈಶ್ವರ ಕುಮಾರ್ ಭಟ್, ಸಮಿತಿ ಸದಸ್ಯ ದಾಮೋದರ ಬಿ.ಎಂ., ಕೋಶಾಧಿಕಾರಿ ಯಾದವ ಕುಲಾಲ್ ಉಪಸ್ಥಿತರಿದ್ದರು.
